ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಮರಣೆ | ಜನರೆದೆಯಲ್ಲಿ ಬದುಕಿದ ಕವಿ ‘ಶಿಶುನಾಳ ಶರೀಫ’

Last Updated 2 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಸೂಫಿಗಳ ಅಧ್ಯಯನ ಮಾಡುತ್ತ 25 ವರ್ಷಗಳ ಹಿಂದೆ ಶಿಶುನಾಳದ ಜಾತ್ರೆಗೆ ಹೋಗಿದ್ದೆ. ಶರೀಫರ ಗದ್ದುಗೆ ಊರಹೊರಗಿನ ಎರೇಹೊಲದ ಬಯಲಲ್ಲಿರುವ ದಿಬ್ಬದ ಮೇಲಿದೆ. ಹಳ್ಳಿಗಳಿಂದ ಜನ ಟ್ರ್ಯಾಕ್ಟರು ಚಕ್ಕಡಿಗಳಲ್ಲಿ ಬಂದಿದ್ದರು. ಅಡುಗೆಗೆ ಪಾತ್ರೆ ದಿನಸಿ ಕಟ್ಟಿಗೆಗಳನ್ನೂ ಹಾಡಲು ಪೇಟಿ ತಬಲ ತಾಳಗಳನ್ನೂ ತಂದಿದ್ದರು. ಜಾತ್ರೆಯ ಕೊನೆತುದಿಯಲ್ಲಿ ಭಂಗಿ ಸೇದುತ್ತ ಸಾಧುಗಳು ಹೊಗೆ ಎಬ್ಬಿಸಿದ್ದರು. ನೂರಾರು ತಂಡಗಳು ದುಂಡಗೆ ಕುಳಿತು ಹಾಡುತ್ತಿದ್ದವು. ಜಾತ್ರೆಯೊಂದು ಹಾಡಿನ ಹಬ್ಬವಾಗುವ ಇತರೆ ತಾಣಗಳೆಂದರೆ ಕೈವಾರ, ಕಡಕೋಳ, ಅಂಬಾಮಠ. ಪ್ರತಿ ತಂಡದ ಮುಂದೆ ಕೂತು ಒಂದೊಂದು ಹಾಡು ಕೇಳಿದರೂ ಒಂದು ರಾತ್ರಿ ಸಾಲುವುದಿಲ್ಲ. ಶರೀಫರ ‘ಬಿದಿರೂ ನೀನಾರಿಗಲ್ಲದವಳು’ ಹಾಡನ್ನು ಹತ್ತಾರು ಕಂಠಗಳಿಂದ ಆಲಿಸಿರುವೆ. ಒಂದೊಂದೂ ವಿಭಿನ್ನ, ಸುಂದರ. ಇವುಗಳಲ್ಲೆಲ್ಲ ಯಲಬುರ್ಗಾದ ಮಾರೆಪ್ಪ ದಾಸರ ಹಾಡಿಕೆ ಅಪೂರ್ವ.

ಜಾತ್ರೆಯಲ್ಲಿ ಒಂಟಿಯಾಗಿ ತಿರುಗುತ್ತಿದ್ದ ನನ್ನನ್ನು ಗಮನಿಸಿದ ಒಬ್ಬರು ‘ಊಟವಾಯಿತೇ?’ ಎಂದರು. ಇಲ್ಲವೆಂದೆ. ಕೈಹಿಡಿದು ತಮ್ಮ ಕುಟುಂಬ ಬೀಡುಬಿಟ್ಟಲ್ಲಿಗೆ ಕರೆದೊಯ್ದರು. ಎರಡು ಜೋಳದರೊಟ್ಟಿಯ ಮೇಲೆ ಕರಿಹಿಂಡಿ ಮೊಸರು ಹಾಕಿಕೊಟ್ಟರು. ಈಗಲೂ ಶಿಶುನಾಳಕ್ಕೆ ಹೋದರೆ ಕಾವ್ಯ ಹಾಡು ಗುರುತತ್ವ ಮಾತ್ರವಲ್ಲ, ಊಟವೂ ಧಾರಾಳ.

ಕರ್ನಾಟಕ ಸಂಸ್ಕೃತಿ ಸೃಷ್ಟಿಮಾಡಿದ ವಿಶಿಷ್ಟ ವ್ಯಕ್ತಿತ್ವಗಳಲ್ಲಿ ಶರೀಫರದೂ ಒಂದು. ಅವರೊಬ್ಬ ಜನತೆಯ ಕವಿ-ದಾರ್ಶನಿಕ. ನಿಜಗುಣರಿಂದ ಶುರುವಾಗುವ ತತ್ವಪದ ಸಾಹಿತ್ಯದಲ್ಲಿ ಕಡಕೋಳ ಮಡಿವಾಳಪ್ಪ, ಕೈವಾರ ನಾರೇಯಣ, ಕೂಡಲೂರ ಬಸವಲಿಂಗಪ್ಪನವರ ಹಾಗೆ, ಅವರೊಬ್ಬ ಪ್ರತಿಭಾವಂತ ಕವಿ. ಅವರಿಗೆ ಜನಪದ ಹಾಡು ಪರಂಪರೆಯಲ್ಲಿ ಇದ್ದಷ್ಟೆ ಪ್ರವೇಶ, ಅಕ್ಷರಸ್ಥ ಕಾವ್ಯದಲ್ಲೂ ಇತ್ತು. ಅವರು ಕನ್ನಡವನ್ನು ಸೂರೆಹೊಡೆದರು. ಛಂದಸ್ಸುಗಳಲ್ಲಿ ಆಟವಾಡಿದರು. ಹಾಗೆಂದು ಅವರ ಕಾವ್ಯ ಸರಳವಲ್ಲ. ‘ಸೋರುತಿಹುದು ಮನೆಯ ಮಾಳಿಗೆ’, ‘ಬರಿದೇ ಬಾರಿಸದಿರು ತಂಬೂರಿ’, ‘ಮೋಹದ ಹೆಂಡತಿ’ ಇವೆಲ್ಲ ಕೇಳಿಕೇಳಿ ಕಂಠಪಾಠ ಆಗಿರಬಹುದು. ಅರ್ಥ? ಪಂಪ ಅಡಿಗರ ಕಾವ್ಯಕ್ಕಿಲ್ಲದ ಸವಾಲು ಅಲ್ಲಮ-ಶರೀಫರ ಕಾವ್ಯಕ್ಕಿದೆ. ಯೌಗಿಕ ಅನುಭವವನ್ನು ಬೆಡಗಿನಲ್ಲಿ ಭಾಷೆಯಲ್ಲಿ ಹೊಮ್ಮಿಸುವ ಯಾವ ಕಾವ್ಯವೂ ಸುಲಿದ ಬಾಳೆಹಣ್ಣಲ್ಲ.

ಶರೀಫರೊಬ್ಬ ಬೀದಿಕವಿ. ಅವರ ಆಳವಾದ ಜನಪದ ಪ್ರಜ್ಞೆಯ ಫಲವಾಗಿ ಇಡೀ ಧಾರವಾಡ ಸೀಮೆಯ ಜನಪದ ಸಂಸ್ಕೃತಿ ಕಾವ್ಯದಲ್ಲಿ ಪ್ರವೇಶ ಪಡೆಯಿತು. ಬೇಂದ್ರೆ ಧಾರವಾಡದ ಬೇಸಾಯ ಸಂಸ್ಕೃತಿಯನ್ನು, ಕುವೆಂಪು ಮಲೆನಾಡನ್ನು ತಮ್ಮ ಕಲಾಕೃತಿಗಳಲ್ಲಿ ಮರುಸೃಷ್ಟಿಸಿದಂತೆ ಇದು. ಶರೀಫರು ಜನಬದುಕಿನ ಚಿತ್ರಗಳನ್ನು ಎತ್ತಿಕೊಂಡು ಗುರುತತ್ವ ಪ್ರಕಟಿಸುವ ಪರಿಣಾಮಕಾರಿ ರೂಪಕ-ಪ್ರತಿಮೆಗಳಾಗಿಸಿದರು. ಬ್ರಿಟಿಷರು ಭಾರತವನ್ನು ಕಬ್ಜಾ ಮಾಡಿಕೊಳ್ಳುವುದನ್ನು ಕಂಗಾಲಾಗಿ ವಿಸ್ಮಯದಿಂದ ನೋಡಿದ ಅವರು, ಪಾಶ್ಚಿಮಾತ್ಯ ಯಂತ್ರ ನಾಗರಿಕತೆಯ ವಿವರಗಳನ್ನೂ ಗೂಢ ರೂಪಕವಾಗಿಸಿದರು. ತಮ್ಮ ಕಾಲದ ನುಡಿಯನ್ನೋ ಬದುಕಿನ ವಿವರಗಳನ್ನೋ ದುಡಿಸಿಕೊಳ್ಳುವುದು ಎಂದರೆ, ಅವಕ್ಕೆ ಅಲೌಕಿಕವಾದ ಅರ್ಥಶಕ್ತಿಯನ್ನು ತುಂಬುವುದು ಎಂದೇ ಅರ್ಥ.

ಶರೀಫರನ್ನು ‘ಮುಸ್ಲಿಂಕವಿ’ ಎನ್ನುವುದುಂಟು. ಇದೊಂದು ವಿಲಕ್ಷಣ ವಿವರಣೆ. ಅವರು ಧಾರ್ಮಿಕವಾಗಿ ಮುಸ್ಲಿಂ ಹಿನ್ನೆಲೆಯಿಂದ ಬಂದವರು ದಿಟ. ಆದರೆ, ಎಲ್ಲ ಸಾಂಸ್ಥಿಕ ಧರ್ಮಗಳ ಬಗ್ಗೆ ಕಟುವಿಮರ್ಶೆ ಮಾಡುತ್ತಿದ್ದ ಅವರೊಬ್ಬ ಗುರುಪಂಥೀಯ ಕವಿ. ಸೂಫಿಯೂ ಅಲ್ಲ. ಶಾಕ್ತೇಯ ಹಿನ್ನೆಲೆಯಿಂದ ಬಂದ ಯೋಗಿ. ಅವರ ಮತ್ತು ಗೋವಿಂದಭಟ್ಟರ ಗುರುಶಿಷ್ಯತ್ವವನ್ನು ಸಾಂಸ್ಕೃತಿಕ ವಿಸ್ಮಯದಂತೆ ನೋಡಲಾಗುತ್ತದೆ. ಗುರುಮಾರ್ಗಗಳಲ್ಲಿ ಇದೊಂದು ಹೊಸ ಸಂಗತಿಯೇ ಅಲ್ಲ. ಶಿಶುನಾಳಕ್ಕೆ ಸಮೀಪವಿರುವ ಶಿರಹಟ್ಟಿ ಫಕೀರೇಶರು ಬಿಜಾಪುರದ ಅಮೀನುದ್ದೀನ್ ಚಿಸ್ತಿಯ ಶಿಷ್ಯರು; ಸಿದ್ಧಾರೂಢರ ಪ್ರಿಯಶಿಷ್ಯ ಕಬೀರಾನಂದರೂ ಮುಸ್ಲಿಂ ಹಿನ್ನೆಲೆಯವರು.

ಹುಬ್ಬಳ್ಳಿ ಸೀಮೆಯ ಮನೆಗಳಲ್ಲಿ ಒಂದು ಗ್ರೂಫ್‍ಫೋಟೊ ಕಾಣಸಿಗುತ್ತದೆ. ಅದರಲ್ಲಿ ಸಿದ್ಧಾರೂಢರು, ಶರೀಫ, ಗರಗದ ಮಡಿವಾಳಪ್ಪ, ನವಲಗುಂದದ ನಾಗಲಿಂಗಪ್ಪ ಮುಂತಾದವರೊಡನೆ ಆಸೀನರಾಗಿದ್ದಾರೆ. ಅವಧೂತರು-ಆರೂಢರು ತಮ್ಮ ದಾರ್ಶನಿಕ ಭಿನ್ನಮತಗಳ ಸಮೇತ ಒಟ್ಟಿಗೆ ಕೂರುವುದು ಸಾಧ್ಯವಿದ್ದ ಪರಂಪರೆಯನ್ನು ಈ ಚಿತ್ರಪಟ ಪ್ರತಿಫಲಿಸುತ್ತದೆ. ಇಂತಹ ಪರಂಪರೆಯಲ್ಲಿ ರೂಪುಗೊಂಡ ಯಾರೂ ಧರ್ಮಾತೀತರಾಗಿರುತ್ತಾರೆ. ಜ್ಞಾನ ಅನುಭವ ಅನ್ನ ಪ್ರೀತಿಗಳನ್ನು ಎಲ್ಲ ಮನುಷ್ಯರಿಗೂ ಭೇದವಿಲ್ಲದೆ ಬಗೆದುಕೊಡುವ ಲೋಕಗಳು ಭಾರತದಲ್ಲಿ ಹಿಂದೆಯೂ ಇದ್ದವು. ಈಗಲೂ ಇವೆ. ಅವನ್ನು ಕಾಪಿಡಬೇಕಿದೆ.

ಸಿದ್ಧಾರೂಢರೂ ಶರೀಫರೂ ತಮ್ಮ ಸಮಕಾಲೀನರಲ್ಲೆಲ್ಲ ಬಹಳ ಜನಪ್ರಿಯರಾದರು. ಶರೀಫರ ಮೇಲಿನ ಸಿನಿಮಾ, ಅಶ್ವತ್-ಸುಬ್ಬಣ್ಣ ಅವರ ಹಾಡಿಕೆಗಳ ಪಾತ್ರವೂ ಇದರಲ್ಲಿದ್ದೀತು. ಭಜನಾ ತಂಡಗಳು, ರೈತರು ಹೊಲದಲ್ಲಿ ಬೀಜ ಬಿತ್ತಿ ಬಂದಂತೆ, ಹೋದಲ್ಲೆಲ್ಲ ಶರೀಫರನ್ನು ಹರಡಿದವು. ಒಮ್ಮೆ ಅಕ್ಕನ ಮನೆಯಿದ್ದ ಚಿಕ್ಕಜಾಜೂರಿನಲ್ಲಿದ್ದೆ. ರಾತ್ರಿಯ ತಂಪ್ಹೊತ್ತು. ದೂರದಲ್ಲಿ ಭಜನೆ ಕೇಳಿತು. ಹೋದೆ. ಬನಶಂಕರಿ ಗುಡಿ. ಹತ್ತುಜನ ಕೂತು ಶರೀಫರ ದೇವೀಸ್ತುತಿಗಳನ್ನು ಹಾಡುತ್ತಿದ್ದರು. ಶಾಕ್ತೇಯರು ಇರುವಲ್ಲೆಲ್ಲ ಪಾರಮಾರ್ಥಿಕ ಅರ್ಥವುಳ್ಳ ಶರೀಫರ ದೇವೀಸ್ತುತಿಗಳು ಚಲಿಸಿದವು. ತತ್ವಕವಿಗಳಲ್ಲಿ ನಿಜಗುಣ-ಸರ್ಪಭೂಷಣರನ್ನು ಬಿಟ್ಟರೆ ವ್ಯಾಪಕವಾದ ಚಲನೆ ಮಾಡಿದವರಲ್ಲಿ ಶರೀಫರೂ ಒಬ್ಬರು. ಅವರ ಮೇಲೆ ಲಾವಣಿಗಳೂ ಹುಟ್ಟಿದವು. ಟಿಪ್ಪು, ರಾಯಣ್ಣ, ಚೆನ್ನಮ್ಮ, ಶರೀಫ ಯಾರೇ ಆಗಲಿ, ಸಮುದಾಯಗಳ ಮಾನಸದಲ್ಲಿ ಸಾಂಸ್ಕೃತಿಕ ನಾಯಕರಾಗಿ ರೂಪಾಂತರ ಪಡೆಯದಿದ್ದರೆ, ಲಾವಣಿಗೆ ವಸ್ತುವಾಗುವುದಿಲ್ಲ.

ಕಳೆದ ವರ್ಷ. ಶರೀಫರ ದ್ವಿಶತಮಾನೋತ್ಸವ ಕಾರ್ಯಕ್ರಮ. ಶಿಶುನಾಳಕ್ಕೆ ಕರೆದಿದ್ದರು. ಐದಾರು ಸಾವಿರ ಜನ ಕೂರಬಲ್ಲ ಪೆಂಡಾಲು. ಕೂಡಿದ್ದವರು ನಲವತ್ತು ಮೀರಿರಲಿಲ್ಲ. ಸ್ಥಳೀಯರು ಕಾಣಲಿಲ್ಲ. ಹಿಂದಿನ ರಾತ್ರಿ ಹದವಾದ ಮಳೆ ಬಿದ್ದಿತ್ತು. ಜನವೆಲ್ಲ ಹೊಲದ ಮೇಲೆ ಬಿದ್ದಿತ್ತು. ಇದು ಶರೀಫರಿಗೆ ತೋರಿದ ಅವಜ್ಞೆಯಲ್ಲ. ಜನ ಅಮಾವಾಸ್ಯೆಗೆ ಜಾತ್ರೆಗೆ ಸ್ವತಃ ಕಷ್ಟಬಿದ್ದು ಬರುತ್ತಾರೆ. ಅದು ಅವರ ಸಾಂಸ್ಕೃತಿಕ ಕ್ಯಾಲೆಂಡರು. ಇದೋ ಸರ್ಕಾರಿ ಕಾರ್ಯಕ್ರಮ. ಜನರಿಗೆ ಉಳುವ-ಬಿತ್ತುವ ಹಂಗಾಮು ಶರೀಫರ ಗುರುತತ್ವ ಮತ್ತು ಹಾಡಿನಷ್ಟೇ ಮುಖ್ಯ. ಲೌಕಿಕದ ಬುನಾದಿಯಿಲ್ಲದ ಪರಮಾರ್ಥಕ್ಕೆ ಬೆಲೆಯಿಲ್ಲ. ಪ್ರಭುತ್ವದ ಆಶ್ರಯವಿಲ್ಲದೆ ಸ್ವಯಂ ಪ್ರೇರಣೆಯಿಂದ ಒಬ್ಬ ದಾರ್ಶನಿಕ ಕವಿಗೆ ಕೊಡುವ ಆತ್ಯಂತಿಕ ಗೌರವದಂತೆ, ಜನ ಶರೀಫರನ್ನು ಎರಡು ಶತಮಾನದಿಂದ ಎದೆಯಲ್ಲಿ ಇಟ್ಟುಕೊಂಡು ಬಂದಿದ್ದಾರೆ. ಇದು ಶರೀಫರ ಕಸುವು ಮಾತ್ರವಲ್ಲ, ತಮ್ಮ ಆಶೋತ್ತರಗಳನ್ನು ಪ್ರತಿನಿಧಿಸುವ ಕವಿಯನ್ನು ಸಂಭಾಳಿಸುವ ಸಮುದಾಯ ಸಂಸ್ಕೃತಿಯ ಗುಣವೂ ಆಗಿದೆ.

ಲೇಖಕ:ರಹಮತ್‌ ತರೀಕೆರೆ​, ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಸಂಸ್ಕೃತಿ ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT