ಮನುಷ್ಯನು ತನ್ನ ಜೀವನದಲ್ಲಿ ಸದಾ ಕಾಲ ಒಳಿತನ್ನು ಬಯಸುವ ಪ್ರವೃತ್ತಿಯನ್ನು ಹೊಂದಿರಬೇಕು. ಬಾಲ್ಯದಲ್ಲಿ ನಾವು ಪಡೆಯುವ ಸಂಸ್ಕಾರವು ನಮಗೆ ಬಹಳ ಮುಖ್ಯವಾಗುತ್ತದೆ. ಸಂಸಾರದ ಕಷ್ಟಗಳು ನಮ್ಮನ್ನು ಅಧೀರರನ್ನಾಗಿ ಮಾಡುತ್ತವೆ. ಇವುಗಳನ್ನು ಗೆಲುವುದೆ ನಮ್ಮ ಮೂಲ ಮಂತ್ರವಾಗಬೇಕು. ಅದಕ್ಕೆ ಬಸವಣ್ಣನವರು ಭವ–ಬಂಧನಗಳ ದುರಿತಂಗಳ ಗೆಲುವಡೆ ಎಂದಿದ್ದಾರೆ. ಭವ ಬಂಧನ ದುರಿತಗಳು ಹಾಗು ಪಾತಕಗಳು ಎನ್ನುವವು ಮಾನವ ಕೃತ್ಯಗಳಾಗಿವೆ. ಇವು ದೈಹಿಕ, ವಾಚಿಕ, ಮಾನಸಿಕವಾದವುಗಳಾಗಿವೆ. ಕಳ್ಳತನ, ಹಿಂಸೆ ಇವು ದೈಹಿಕವಾದ ಪಾತಕಗಳು. ಸುಳ್ಳು ಹೇಳುವುದು, ನಿಂದೆ ಮಾಡುವುದು, ವಾಚಿಕ ಪಾತಕಗಳು. ಅನ್ಯರ ಸಂಪತ್ತಿನ ಚಿಂತನೆ, ಅನಿಷ್ಟಗಳ ಕುರಿತು ಆಲೋಚಿಸುವುದು ಮಾನಸಿಕ ಪಾತಕಗಳು. ಈ ಎಲ್ಲ ಪಾತಕಗಳ ಪರಿಹಾರವೆ ಭಗವಂತನ ಪ್ರಾರ್ಥನೆ.