ಭಗವಂತನನ್ನು ಒಲಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಸಂಗೀತದ ಮೂಲಕವೂ ಒಲಿಸಿಕೊಳ್ಳುವುದು ಒಂದು ವಿಧಾನವಾಗಿದೆ. ಇಲ್ಲಿ ಬಸವಣ್ಣನವರು ತಮ್ಮ ಶರೀರದ ಅಂಗಾಂಗಗಳನ್ನೆ ವೀಣೆಯ ಒಂದೊಂದು ಭಾಗಗಳನ್ನಾಗಿ ಮಾಡಿ, ಮೂವತ್ತೆರಡು ಸ್ವರಗಳ ಮುಖಾಂತರ ಭಗವಂತನನ್ನು ಸ್ಮರಿಸುವೆನು ಎಂದಿದ್ದಾರೆ. ದೇಹವೆ ದಂಡಿಗೆ(ಸ್ವರ ನುಡಿಸುವ ವಾದ್ಯ)ಯಾದರೆ, ತಲೆಯು ಆ ವಾದ್ಯದ ಮೇಲ್ಭಾಗದಲ್ಲಿರುವ ಸೋರೆ (ವೀಣೆಯ ಮೇಲಿರುವ ಬುರುಡೆ)ಯಾಗಲಿ. ನರಗಳೆಲ್ಲ ತಂತಿಗಳಾಗಲಿ. ಬೆರಳುಗಳೆಲ್ಲ ಕಡ್ಡಿಗಳಾಗಲಿ. ಇವೆಲ್ಲವುಗಳ ಮೂಲಕ ಮನಸ್ಸು ತುಂಬಿ ಬರುವ ಹಾಗೆ ಹಲವಾರು ರಾಗಗಳಲ್ಲಿ ಹಾಡಿ ಭಗವಂತನನ್ನು ಒಲಿಸಿಕೊಳ್ಳುವೆನು ಎನ್ನುವುದನ್ನು ಈ ವಚನದ ಮೂಲಕ ತಿಳಿಸಿದ್ದಾರೆ. ಹೀಗೆ ನಮ್ಮನ್ನು ನಾವು ದೇವರಿಗೆ ಸಮರ್ಪಿಸಿಕೊಳ್ಳಬೇಕು.