ಶ್ರದ್ಧೆ–ನಿಷ್ಠೆಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಒಳಿತೇ ಆಗುತ್ತದೆ. ಕೆಟ್ಟ ಕೆಲಸಗಳನ್ನು ಮಾಡದಂತೆ ತಡೆಯುವ ಶಕ್ತಿ ಆ ನಾಮಸ್ಮರಣೆಗೆ ಇದೆ ಎನ್ನುವುದನ್ನು ಉದಾಹರಣೆಗಳೊಂದಿಗೆ ಬಸವಣ್ಣನವರು ಮೇಲಿನ ವಚನದ ಮೂಲಕ ವಿವರಿಸಿದ್ದಾರೆ. ದೊಡ್ಡ ಗಾತ್ರದ ಆನೆಯು ಸಣ್ಣದಾದ ಅಂಕುಶಕ್ಕೆ ಅಂಜುತ್ತದೆ. ಬೃಹತ್ತಾದ ಗುಡ್ಡವನ್ನು ವಜ್ರದಿಂದ ಸೀಳಬಹುದು. ದೀಪದ ಬೆಳಕಿನಿಂದ ಕತ್ತಲೆಯು ಮಾಯವಾಗುವುದು. ಅರಣ್ಯವನ್ನು ಬೆಂಕಿಯು ಆಹುತಿ ತೆಗೆದುಕೊಳ್ಳುವಂತೆ, ಭಗವಂತನ ನಾಮಸ್ಮರಣೆ ಮಾಡುವುದರಿಂದ ಪರಧನ, ಪರಸ್ತ್ರೀ, ಪರನಿಂದೆ, ಪರಹಿಂಸೆಗಳೆಂಬ ಪಂಚಮಹಾಪಾತಕಗಳೆಡೆ ಮನಸ್ಸು ಹರಿಯುವುದಿಲ್ಲ. ಆನೆ, ಗುಡ್ಡ, ಕತ್ತಲೆ, ಕಾಡು ಮತ್ತು ಪಂಚ ಮಹಾಪಾತಕಗಳು ಅತ್ಯಂತ ಕಠಿಣವಾದುವುಗಳು. ಇವುಗಳನ್ನು ಒಂದೊಂದರ ಸಹಾಯದಿಂದ ನಾವು ಭೇದಿಸಬಹುದು. ಹಾಗೆಯೇ ಭಗವಂತನ ನಾಮಸ್ಮರಣೆಯು, ಕೆಟ್ಟ ಕೆಲಸಗಳನ್ನು ಮಾಡದಂತೆ ನಮ್ಮನ್ನು ತಡೆಯುತ್ತದೆ. ಸರಿ ದಾರಿಯಲ್ಲಿ ಸಾಗುವುದಕ್ಕೆ ಸಹಕರಿಸುತ್ತದೆ. ಕೆಟ್ಟದ್ದರಿಂದ ದೂರವಿದ್ದರೆ ಎಲ್ಲವೂ ಒಳಿತೇ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ನಡೆಯಿರಬೇಕು.