ಎಲ್ಲರೂ ತಿಳಿದಿರುವಂತೆ ಈ ಜಗತ್ತಿನಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡೇ ಜಾತಿಗಳು ಮುಖ್ಯವಾಗಿವೆ. ಆದರೆ, ಬಸವಣ್ಣನವರ ಪ್ರಕಾರ ಭವಿ ಮತ್ತು ಭಕ್ತ ಎಂಬ ಎರಡು ಜಾತಿಗಳು ಅವುಗಳನ್ನು ಮೀರಿದವುಗಳಾಗಿವೆ. ಅದಕ್ಕೆ ಈ ಭವಸಾಗರದಲ್ಲಿರುವ ಭವಿಗಳೆಲ್ಲ ಭಕ್ತರಾಗಬೇಕು. ಪ್ರತಿಯೊಂದು ಜನ್ಮದಲ್ಲಿಯೂ ನನ್ನ ಮನಸ್ಸು ಭಗವಂತನ ಸ್ಮರಣೆ ಮಾಡಲು ಹಾತೊರೆಯುತ್ತದೆ. ಬೇರೆ ಬೇರೆ ಜನ್ಮದಲ್ಲಿಯೂ ನನ್ನ ಮನಸ್ಸು ಚಂಚಲವಾಗದೆ, ಸಾರಚಕ್ರದಲ್ಲಿ(ಭವರಾಟಾಳದೊಳು) ಸಿಲುಕದೆ, ಯಾವುದೇ ಮೋಹಕ್ಕೆ ಒಳಗಾಗದೆ ಕೇವಲ ನಿನ್ನದೆ ಧ್ಯಾನದಲ್ಲಿ ತಲ್ಲೀನನಾಗಿ ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತದೆ. ಅದಕ್ಕೆಲ್ಲ ಕಾರಣ ನೀನೆ (ಭವರೋಗ ವೈದ್ಯ). ಸಂಸಾರದ ಸೋಂಕು ತಗುಲದೆ ಇರುವ ನೀನು (ಭವವಿರಹಿತ) ನನ್ನ ಕಡೆ ಗಮನ ಕೊಡು (ಅವಧಾರು), ಕರುಣೆಯಿಂದ ಕೃಪೆ ತೋರು ಭಗವಂತ ಎಂದು ಭಕ್ತಿಯಿಂದ ಈ ವಚನದಲ್ಲಿ ಪ್ರಾರ್ಥಿಸಿದ್ದಾರೆ. ಭಗವಂತನ ಕೃಪೆಗೆ ಪಾತ್ರವಾಗಲು ಪ್ರಯತ್ನಿಸುತ್ತಿರಬೇಕು.