ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | 2023ರ ಫೆಬ್ರುವರಿ 19 ರಿಂದ 25ರವರೆಗೆ

Last Updated 19 ಫೆಬ್ರುವರಿ 2023, 2:50 IST
ಅಕ್ಷರ ಗಾತ್ರ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ರಾಜಕಾರಣಿಗಳು ಯಾವುದೇ ಮುಂದಾಲೋಚನೆ ಇಲ್ಲದೆ ಭರವಸೆಗಳನ್ನು ನೀಡಬೇಡಿ, ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕುವಿರಿ. ಹೊಸದೊಂದು ವಿದ್ಯೆಯನ್ನು ಕಲಿಯುವ ಉತ್ಸಾಹ ನಿಮ್ಮಲ್ಲಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಕೃಷಿಕರಿಗೆ ಕೃಷಿ ಕ್ಷೇತ್ರದಲ್ಲಿ ಚೇತರಿಕೆ ಕಂಡು ತುಸು ನೆಮ್ಮದಿ ಮೂಡುತ್ತದೆ. ಆಸ್ತಿ ವಿವಾದಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ. ವೃತ್ತಿಯಲ್ಲಿ ಸ್ವಲ್ಪಮಟ್ಟಿನ ಅಭಿವೃದ್ಧಿ ಕಾಣಬಹುದು. ಹೈನುಗಾರಿಕೆ ಮಾಡುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ನರದೌರ್ಬಲ್ಯ ಇರುವವರು ಹೆಚ್ಚು ಎಚ್ಚರಿಕೆ ವಹಿಸುವುದು ಅನಿವಾರ್ಯ. ಸರ್ಕಾರಿ ಸಂಸ್ಥೆಗಳಿಗೆ ವಸ್ತುಗಳನ್ನು ಪೂರೈಕೆ ಮಾಡುತ್ತಿರುವವರಿಗೆ ಹೆಚ್ಚಿನ ಪೂರೈಕೆಗಾಗಿ ಆದೇಶಗಳು ಬರಬಹುದು.

ವೃಷಭ ರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ1 2)
ವಿಮಾ ಸಲಹೆಗಾರರಿಗೆ ಹೆಚ್ಚು ಯಶಸ್ಸು ಕಂಡುಬರುವ ಸಾಧ್ಯತೆ ಇದೆ. ಈ ಕಾರ್ಯಕ್ಕಾಗಿ ದೂರ ಪ್ರಯಾಣ ಮಾಡಿದರೂ ನಷ್ಟವೇನಿಲ್ಲ. ಈ ಹಿಂದೆ ಬಂಗಾರದಲ್ಲಿ ಹೂಡಿಕೆ ಮಾಡಿದ್ದವರಿಗೆ ಹೆಚ್ಚಿನ ಲಾಭ ದೊರಕುತ್ತದೆ. ಹೂವಿನ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ನಡೆದು ಹೆಚ್ಚು ಲಾಭ ಬರುತ್ತದೆ. ಉದ್ದಿಮೆದಾರರು ಈಗಿರುವ ವಸ್ತುವಿನ ತಯಾರಿಕೆಯ ಜೊತೆಗೆ ಹೊಸ ರೂಪದ ವಸ್ತುವನ್ನು ತಯಾರಿಸಲು ಆರಂಭಿಸಬಹುದು. ಕೆಲಸಗಾರರೊಡನೆ ಅತಿ ಕೋಪ ನಿಮಗೆ ಒಳ್ಳೆಯದಲ್ಲ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ತಲುಪಬಹುದು. ವಸ್ತ್ರಾಭರಣಗಳನ್ನು ಖರೀದಿ ಮಾಡುವ ಯೋಗವಿದೆ. ವಯಸ್ಕರಿಗೆ ವಿವಾಹ ಸಂಬಂಧ ಒದಗಿ ಬರಬಹುದು. ಪೊಲೀಸ್ ಹುದ್ದೆಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಯ ಕೆಲಸದಲ್ಲಿ ಯಶಸ್ಸು ಒದಗುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಮೇಲಧಿಕಾರಿಗಳ ಅನುಗ್ರಹವಿದ್ದು ವೃತ್ತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳು ಸಲೀಸಾಗಿ ಆಗುವುದು. ವ್ಯಾಪಾರಿಗಳಿಗೆ ತೃಪ್ತಿಕರವಾದ ವ್ಯಾಪಾರ ಆಗುವ ಸಂದರ್ಭವಿದೆ. ಮರದ ಕೆತ್ತನೆಯ ಕುಶಲ ಕರ್ಮಿಗಳಿಗೆ ಬೇಡಿಕೆ ಹೆಚ್ಚಾಗಿ ಆದಾಯವು ಹೆಚ್ಚುತ್ತದೆ. ಸ್ವಂತ ಉದ್ಯೋಗವನ್ನು ನಡೆಸುತ್ತಿರುವವರು ತಮ್ಮ ಕೆಲವೊಂದು ಜವಾಬ್ದಾರಿಗಳನ್ನು ಹಂಚುವುದು ಬಹಳ ಒಳ್ಳೆಯದು. ರಾಜಕೀಯ ವ್ಯಕ್ತಿಗಳಿಗೆ ಅವರ ವಿರೋಧಿಗಳಿಂದ ತೊಂದರೆ ಬರುವ ಸಾಧ್ಯತೆ ಇದೆ. ನಿಮ್ಮ ಅಧಿಕ ಕೋಪ ಕೆಲವೊಂದು ನಷ್ಟಗಳಿಗೆ ಕಾರಣವಾಗಬಹುದು. ಮಕ್ಕಳ ಏಳಿಗೆಯಲ್ಲಿ ಅಂತಹ ಪ್ರಗತಿ ಇರುವುದಿಲ್ಲ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ವ್ಯವಹಾರಗಳಲ್ಲಿ ದೃಢ ನಿರ್ಧಾರಗಳಿಂದ ಮುಂದುವರೆಯುವುದು ಬಹಳ ಒಳ್ಳೆಯದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಹಾಡುಗಾರರಿಗೆ ತಮ್ಮ ಸಾಧನೆಯಿಂದ ಯಶಸ್ಸನ್ನು ಪಡೆಯುವ ಯೋಗವಿದೆ. ಕೆಲವೊಂದು ಗುಂಪು ಚಟುವಟಿಕೆಗಳಿಗೆ ನಿಮಗೆ ಮುಂದಾಳತ್ವ ದೊರೆಯುತ್ತದೆ. ಕಾನೂನು ಪಂಡಿತರಿಗೆ ಹೆಚ್ಚಿನ ಬೇಡಿಕೆ ಇದ್ದು ಆದಾಯವು ಹೆಚ್ಚುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿನ ನಿಮ್ಮ ತಿಳಿವಳಿಕೆಯ ಸಲಹೆಗೆ ಹೆಚ್ಚು ಮನ್ನಣೆಯು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಮಕ್ಕಳ ಏಳಿಗೆ ತೃಪ್ತಿಕರವಾಗಿರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಆಗಬಹುದು, ಎಚ್ಚರವಹಿಸಿರಿ. ವ್ಯವಹಾರದಲ್ಲಿ ನಿಮ್ಮ ಮಾತಿಗೆ ಹೆಚ್ಚು ಬೆಲೆ ಬರುತ್ತದೆ. ಧನ ಆದಾಯವು ಸಾಮಾನ್ಯವಾಗಿರುತ್ತದೆ. ಹಿರಿಯರಿಂದ ಆಭರಣಗಳು ಉಡುಗೊರೆಯಾಗಿ ದೊರೆಯುವ ಸಾಧ್ಯತೆಗಳಿವೆ. ವಿದೇಶಿ ಕಂಪನಿಗಳ ಮೇಲೆ ಹೂಡಿದ್ದ ಹಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನಿಮ್ಮ ಭಾವನೆಗಳನ್ನು ಹಂಚಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ವ್ಯಕ್ತಿಗಳ ಸ್ನೇಹ ಮತ್ತು ಪರಿಚಯ ಒದಗಲಿದೆ. ಸಿದ್ಧಪಡಿಸಿದ ಆಹಾರವನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ವ್ಯಾಪಾರ ಒದಗಿ ಬರುತ್ತದೆ. ಮಾತುಗಳನ್ನು ಹೆಚ್ಚು ಎಚ್ಚರದಿಂದ ಆಡಿರಿ, ಇಲ್ಲವಾದಲ್ಲಿ ಮುಜುಗರಕ್ಕೆ ಒಳಗಾಗುವ ಸಂದರ್ಭವಿದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ನಿರುದ್ಯೋಗಿಗಳಿಗೆ ಒಂದು ಉದ್ಯೋಗ ದೊರೆಯುವ ಲಕ್ಷಣವಿದೆ. ಧಾರ್ಮಿಕ ಪ್ರಜ್ಞೆ ಹೆಚ್ಚು ಜಾಗೃತವಾಗುತ್ತದೆ. ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಸ್ವಲ್ಪಮಟ್ಟಿನ ನಿಧಾನವನ್ನು ಕಾಣಬಹುದು. ವೃತ್ತಿಯಲ್ಲಿ ಹೆಚ್ಚು ತಿರುಗಾಟವಿರುತ್ತದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ. ಕೃಷಿಯ ಮೇಲೆ ಹೆಚ್ಚು ಆಸಕ್ತಿ ಮೂಡಿ ಅದರ ಬಗ್ಗೆ ಗಮನಹರಿಸುವಿರಿ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಪೋಷಕರಿಂದ ಮಕ್ಕಳ ಆಸೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಮನೆ ನಿರ್ಮಾಣ ಮಾಡುತ್ತಿದ್ದವರಿಗೆ ಇದ್ದ ಅಡೆತಡೆಗಳು ಸ್ವಲ್ಪಮಟ್ಟಿಗೆ ದೂರವಾಗುತ್ತವೆ. ಲೇಖನ ಮಾಲೆಯನ್ನು ಸಿದ್ಧಪಡಿಸುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಬಂಧುಗಳ ಗಲಾಟೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ನಿಮಗೆ ದುಬಾರಿಯಾಗಬಹುದು. ಯಂತ್ರೋಪಕರಣಗಳನ್ನು ದುರಸ್ತಿ ಮಾಡುವವರಿಗೆ ಹೆಚ್ಚಿನ ಕೆಲಸ ದೊರತು ಸಂಪಾದನೆಯಾಗುತ್ತದೆ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ. ಹೊಸ ಆಭರಣ ಕೊಳ್ಳುವ ಮನಸ್ಸು ಮಾಡುವಿರಿ. ಮೂಳೆ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಕೃಷಿ ಭೂಮಿ ವಿಸ್ತರಣೆಯನ್ನು ಮಾಡುವ ಕಾರ್ಯಕ್ಕೆ ಈಗ ಮುಂದಾಗುವಿರಿ. ವೃತ್ತಿಯಲ್ಲಿ ಸ್ವಲ್ಪ ಪ್ರಗತಿ ಇರುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಸಾರ್ವಜನಿಕ ಜೀವನದಲ್ಲಿ ಇರುವವರು ಒರಟು ಮಾತು ಆಡುವುದನ್ನು ಬಿಡುವುದು ಒಳ್ಳೆಯದು. ಸ್ವಂತ ಉದ್ದಿಮೆ ನಡೆಸುವವರ ಹಣಕಾಸಿನ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ. ಕೃಷಿ ವ್ಯಾಪಾರಿಗಳು ದಳ್ಳಾಳಿಗಳಿಂದ ಮೋಸ ಹೋಗುವ ಸಾಧ್ಯತೆ ಇದೆ, ಹೆಚ್ಚು ಎಚ್ಚರವಹಿಸಿರಿ. ಖರ್ಚು ಕಡಿಮೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವಿರಿ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಹಳೆಯ ವಾಹನಗಳನ್ನು ಕೊಂಡು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ವೃತ್ತಿಯಲ್ಲಿದ್ದ ಮೇಲಧಿಕಾರಿಗಳ ಕಿರುಕುಳ ನಿಧಾನವಾಗಿ ಕಡಿಮೆಯಾಗುತ್ತವೆ. ಭೂ ವ್ಯಾಪಾರ ಮಾಡುವ ದಳ್ಳಾಳಿಗಳಿಗೆ ಹೆಚ್ಚು ಕಮಿಷನ್‌ ದೊರೆಯುತ್ತದೆ. ಸರ್ಕಾರಿ ದಾಖಲೆಗಳಲ್ಲಿ ಕೆಲವು ತೊಡಕುಗಳು ಆಗಬಹುದು. ಕೃಷಿಕರಿಗೆ ಹೆಚ್ಚಿನ ಆದಾಯವಿರುವುದಿಲ್ಲ. ಸರ್ಕಾರಿ ವ್ಯವಹಾರಗಳ ಮಧ್ಯವರ್ತಿಗಳಿಗೆ ಆದಾಯ ದೊರೆಯುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ವೃತ್ತಿಯಲ್ಲಿ ಸಮಸ್ಯೆಗಳು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸಿ ಗೆಲ್ಲುವಿರಿ. ಸಂಶೋಧಕರಿಗೆ ಸಂಶೋಧನೆಯಲ್ಲಿ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆಗಳಿವೆ. ಕಾರ್ಮಿಕರು ಅವರ ಅಧಿಕಾರಿಗಳ ಜೊತೆ ಮುಕ್ತ ಚರ್ಚೆ ಮಾಡಿದಲ್ಲಿ ಅವರ ಸಮಸ್ಯೆಗಳು ಪರಿಹಾರವಾಗುವುದು. ಉದ್ಯೋಗದ ನಿಮಿತ್ತ ದೂರದ ಸ್ಥಳಕ್ಕೆ ಹೋಗಿ ಬರುವ ಸಾಧ್ಯತೆ ಇದೆ. ಲಲಿತ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ನಿಮ್ಮ ಚಾಣಾಕ್ಷದ ನಿರ್ಧಾರಗಳು ನಿಮ್ಮನ್ನು ಗುಂಪಿನಲ್ಲಿ ತೂಕದ ವ್ಯಕ್ತಿಯನ್ನಾಗಿಸುತ್ತದೆ. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ. ಆಟೋ ಮೊಬೈಲ್ ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಸಂಗಾತಿಗೆ ಉತ್ತಮ ಆಸ್ತಿ ಬಳುವಳಿಯಾಗಿ ಬರಬಹುದು.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಕಚೇರಿ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿ ಬರುವ ಸಾಧ್ಯತೆಗಳಿವೆ. ಉದ್ದಿಮೆದಾರರು ತಮ್ಮ ಯೋಜನೆಗಳ ಬಗ್ಗೆ ಹಿರಿಯ ತಂತ್ರಜ್ಞರೊಡನೆ ಸಮಾಲೋಚನೆ ಮಾಡುವುದು ಉತ್ತಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಪತ್ರಿಕೋದ್ಯಮದವರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಆದಾಯವು ತೃಪ್ತಿಕರವಾಗಿರುತ್ತದೆ. ಬಂಧುಗಳೊಡನೆ ವಿಶ್ವಾಸವನ್ನು ವೃದ್ಧಿಸಿಕೊಳ್ಳುವಿರಿ. ಅಪೇಕ್ಷಿತ ಆಸ್ತಿಯನ್ನು ಈಗ ಕೊಳ್ಳುವ ಯೋಗವಿದೆ. ಶಸ್ತ್ರಚಿಕಿತ್ಸೆ ಆಗಿರುವವರು ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳಿರಿ. ಸಂಗಾತಿಯ ಸಂಪಾದನೆ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚು ಸಂಪಾದನೆ ಆಗುವ ಯೋಗವಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ತಾಳುವಿರಿ. ಕೃಷಿಯಲ್ಲಿ ನಿರೀಕ್ಷಿಸಿದಷ್ಟು ಆದಾಯವಿರುವುದಿಲ್ಲ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಉದ್ದಿಮೆದಾರರಿಗೆ ಅವರ ಉದ್ದಿಮೆಯನ್ನು ಸುಧಾರಿಸಲು ಮತ್ತು ಸರಿದಾರಿಗೆ ತರಲು ಸಾಕಷ್ಟು ಅವಕಾಶಗಳು ಒದಗುತ್ತವೆ. ತಾಂತ್ರಿಕ ತಜ್ಞರಿಗೆ ಹೊಸ ಹೊಸ ಅವಕಾಶಗಳು ದೊರೆಯುತ್ತವೆ. ಮಾಧ್ಯಮದಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದ ಕೆಲಸ ಮಾಡಬೇಕು. ದಂತ ವೈದ್ಯರಿಗೆ ಹೆಚ್ಚು ಅನುಕೂಲವಿರುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಬಂಧುಗಳ ಸಹಕಾರ ನಿಮಗೆ ಹೆಚ್ಚಾಗಿ ದೊರೆಯುತ್ತದೆ. ಆಸ್ತಿ ವಿಚಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಕ್ರೀಡಾಪಟುಗಳಿಗೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಪ್ರೀತಿ ಪ್ರೇಮದ ಸೆಳೆತಕ್ಕೆ ಸಿಲುಕುವ ಸಾಧ್ಯತೆ ಇದೆ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಯಾವುದೇ ರೀತಿ ವ್ಯತ್ಯಾಸವಿಲ್ಲ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸವೂ ಹೆಚ್ಚಾಗುತ್ತದೆ. ಹಿರಿಯರು ತೆಗೆದುಕೊಳ್ಳುವ ಪರಿಣಾಮಕಾರಿ ನಿರ್ಧಾರಗಳು ಅವರ ಕುಟುಂಬವನ್ನು ಮೇಲೆತ್ತುತ್ತದೆ. ಚಾಲಕ ವರ್ಗದವರಿಗೆ ಹೆಚ್ಚಿನ ಸಂಪಾದನೆಯಾಗುವ ಯೋಗವಿದೆ. ವಾಹನ ತರಬೇತಿ ಶಾಲೆ ನಡೆಸುತ್ತಿರುವವರಿಗೆ ಆದಾಯ ಹೆಚ್ಚುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಧಾರ್ಮಿಕ ವಿಚಾರಗಳನ್ನು ಪ್ರಚಾರ ಮಾಡುವವರಿಗೆ ಹೆಚ್ಚಿನ ಮಾನ್ಯತೆಯು ದೊರೆಯುತ್ತದೆ. ಕೆಲವೊಂದು ವಿಚಾರಗಳಲ್ಲಿ ಅನುಭವಸ್ಥರ ಸಲಹೆ ಪಡೆಯುವುದು ಸೂಕ್ತ. ಯುವಕರ ಅತಿಯಾದ ಆತ್ಮವಿಶ್ವಾಸ ಸ್ವಲ್ಪಮಟ್ಟಿಗೆ ತೊಂದರೆ ಕೊಡಬಹುದು. ಕೃಷಿ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಹಾಕಬೇಕಾದ ಅನಿವಾರ್ಯವಿದೆ. ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಾಗಿ ಹೆಚ್ಚಿನ ತಯಾರಿ ಮಾಡಿಕೊಳ್ಳಬೇಕು. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭವಿದೆ. ಸಿಹಿತಿಂಡಿ ತಯಾರಿಸಿ ಮಾರುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಹಿರಿಯರ ಆರೋಗ್ಯ ವ್ಯತ್ಯಾಸದಿಂದಾಗಿ ಆಸ್ಪತ್ರೆಯ ಅಲೆದಾಟ ಹೆಚ್ಚಾಗುವ ಸಾಧ್ಯತೆಗಳಿವೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಉದ್ಯೋಗ ಸ್ಥಳದಲ್ಲಿ ಬಹಳ ಚುರುಕಾಗಿ ಕೆಲಸ ಮಾಡುವಿರಿ. ಹಿರಿಯರ ಆಸ್ತಿಯನ್ನು ಹೋರಾಟ ಮಾಡಿ ಪಡೆಯಬಹುದು. ಅಜೀರ್ಣ ಬಾಧೆ ಸ್ವಲ್ಪಮಟ್ಟಿಗೆ ಕಾಡಬಹುದು. ಸಂಗಾತಿಯ ಸಂಪಾದನೆಯಲ್ಲಿ ಸ್ವಲ್ಪ ಹೆಚ್ಚಳವನ್ನು ಕಾಣಬಹುದು. ಸರಕು ಸಾಗಣೆ ವ್ಯಾಪಾರ ಮಾಡುವವರಿಗೆ ಹೆಚ್ಚಿನ ವ್ಯವಹಾರ ನಡೆದು ಆದಾಯ ಹೆಚ್ಚುತ್ತದೆ. ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT