ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | 30-10-2022 ರಿಂದ 05-11-2022 ರವರೆಗೆ

Last Updated 29 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ನಿಂತುಹೋಗಿದ್ದ ಕೆಲವು ಅಭಿವೃದ್ಧಿಯ ಕೆಲಸದ ಕಡೆ ಗಮನಹರಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ತಿಕ್ಕಾಟ ಬಂದರೂ ಮಾತಿನಲ್ಲೇ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ. ಪ್ರವಾಸೋದ್ಯಮ ಸಂಸ್ಥೆಯನ್ನು ನಡೆಸುವವರಿಗೆ ಉತ್ತಮವಾದ ವ್ಯವಹಾರವಿರುತ್ತದೆ. ತಾಂತ್ರಿಕ ತಜ್ಞರಿಗೆ ಉತ್ತಮ ಕೆಲಸ ಸಿಗುವ ಯೋಗವಿದೆ. ನಿಮ್ಮ ಸಂಗಾತಿಗೆ ಹೊಸ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಇತರರ ಭಾವನೆಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡಿರಿ. ಇದು ನಿಮ್ಮ ಏಳಿಗೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಬರುವ ಯೋಗವಿದೆ. ಕೃಷಿಗೆ ಸಂಬಂಧ ಪಟ್ಟ ಕೆಲಸಗಳನ್ನು ಬಿಡುವಿಲ್ಲದೆ ಮಾಡುವಿರಿ. ಕಬ್ಬಿಣದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರುತ್ತದೆ. ಕೆಲಸಗಾರರನ್ನು ಪೂರೈಸುವ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚುತ್ತದೆ.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ 1 2)
ಮನೆಯ ಆಗುಹೋಗುಗಳ ಬಗ್ಗೆ ಹಿರಿಯರೊಡನೆ ಚರ್ಚೆ ಮಾಡುವಿರಿ. ಅಭಿಪ್ರಾಯಗಳ ವಿನಿಮಯದಿಂದ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದು. ಹಣದ ಹರಿವು ಸಾಕಷ್ಟಿರುತ್ತದೆ. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರು ಸ್ವಲ್ಪ ಹಿನ್ನಡೆ ಅನುಭವಿಸಬಹುದು. ಒಡಹುಟ್ಟಿದವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಕೃಷಿಯಿಂದ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯಗಳ ಜೊತೆಗೆ ಸೂಕ್ತ ಮಾರ್ಗದರ್ಶನ ಸಿಗುತ್ತದೆ. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುನ್ನುಗ್ಗಿ ಸಹಾಯ ಮಾಡುವರು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಚುರುಕುತನ ಕಾಣಬಹುದು. ಧಾರ್ಮಿಕ ಕೆಲಸವನ್ನು ಮಾಡುವವರಿಗೆ ಸಮಾಜದಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ವಾಯು ಪ್ರಕೋಪ ನಿಮ್ಮನ್ನು ಕಾಡಬಹುದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿರೀಕ್ಷಿಸಿದ ಕಾರ್ಯಗಳು ನಿಧಾನವಾಗಿಯಾದರೂ ಆಗಿ ಮನಸ್ಸಿಗೆ ಹಗುರವೆನಿಸುವುದು. ಯಂತ್ರೋಪಕರಣಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಇದುವರೆಗೆ ನಡೆಸುತ್ತಿದ್ದ ಐಶಾರಾಮಿ ಜೀವನದ ಬಗ್ಗೆ ಜಿಗುಪ್ಸೆ ಹುಟ್ಟಬಹುದು. ಹೋಟೆಲ್ ಉದ್ಯಮದವರಿಗೆ ಸ್ವಲ್ಪಮಟ್ಟಿಗೆ ಲಾಭ ಹೆಚ್ಚಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಹೆಚ್ಚು ಶ್ರಮವಹಿಸಬೇಕು. ಆಸ್ತಿಪತ್ರ ಬರಹಗಾರರಿಗೆ ಹೆಚ್ಚು ಕೆಲಸ ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ಮಾತುಕತೆಯ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಬಹಳ ಉತ್ತಮ. ಪೆಟ್ರೋಲಿಯಂ ವಸ್ತುಗಳ ಮಾರಾಟಗಾರರಿಗೆ ಸಾಕಷ್ಟು ಲಾಭ ಬರುತ್ತದೆ. ನಿಮ್ಮ ಕಂಪನಿಯ ವಿದೇಶದಲ್ಲಿನ ಹುದ್ದೆಗಾಗಿ ಅರ್ಜಿಯನ್ನು ಈಗ ಸಲ್ಲಿಸಬಹುದು. ಆಸ್ತಿ ನಿವೇಶನ ಕೊಳ್ಳಲು ಪ್ರಯತ್ನ ಮುಂದುವರಿಸಿರಿ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಕೆಲವೊಮ್ಮೆ ಕೆಲವು ವಿಷಯಗಳಲ್ಲಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು, ಆಗ ಹಿಂಜರಿಕೆ ಬೇಡ. ನೀವು ಅಪೇಕ್ಷಿಸಿದ್ದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಯಾವುದೇ ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ರಾಜಕೀಯದಲ್ಲಿ ಆಸಕ್ತಿ ಇರುವವರು ಹೆಚ್ಚು ಚುರುಕಾಗಿ ಜನಗಳ ಮಧ್ಯೆ ಓಡಾಡುವುದು ಅತಿ ಅಗತ್ಯ. ಲೇವಾದೇವಿ ಮಾಡುವವರಿಗೆ ನಂಬಿಕೆ ದ್ರೋಹದ ಘಟನೆಗಳು ಆಗಬಹುದು. ಸರ್ಕಾರಿ ಗುತ್ತಿಗೆಗಳನ್ನು ಪಡೆಯುವಾಗ ನಿಯಮಗಳ ಬಗ್ಗೆ ಸರಿಯಾಗಿ ತಿಳಿಯಿರಿ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸ್ಥಿರಾಸ್ತಿ ವಿಚಾರಗಳನ್ನು ತೀರ್ಮಾನ ಮಾಡಲು ಹೋದ ನಿಮಗೆ ಅದರ ಗೋಜಲುಗಳನ್ನು ಕಂಡು ಗಾಬರಿಯಾಗುವುದು.

ಸಿಂಹ ರಾಶಿ (ಮಖಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಅತಿಯಾದ ಆತ್ಮಾಭಿಮಾನ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಂತೆ ಇರುವುದಿಲ್ಲ. ವಿದೇಶದಲ್ಲಿರುವ ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹಿನ್ನಡೆ ಇರಲಿದೆ. ಕೈಕಾಲು ಸೆಳೆತ ಇರುವವರು ಸ್ವಲ್ಪ ಎಚ್ಚರವಹಿಸಿರಿ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಹೆಚ್ಚಳವನ್ನು ಕಾಣಬಹುದು. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು. ನಿಮ್ಮ ತಂದೆಯಿಂದ ಕೃಷಿಭೂಮಿ ದೊರೆಯಬಹುದು. ವೃತ್ತಿಯಲ್ಲಿ ಇದ್ದ ಗೋಜಲುಗಳು ಕಡಿಮೆಯಾಗಿ ನೆಮ್ಮದಿ ಬರುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಕಡಿಮೆಯಾಗಬಹುದು. ಸ್ವಂತ ಉದ್ದಿಮೆ ನಡೆಸುವವರು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಬಹುದು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತಿಳಿವಳಿಕೆ ಹೊಂದಿದ ನೀವು, ಯಾರದೋ ವಶೀಲಿಗೆ ಮಣಿದು ಹಣಕ್ಕಾಗಿ ಅಪರಾಧ ಕೆಲಸವನ್ನು ಮಾಡಲು ಮುಂದಾಗುವಿರಿ. ಧನ ಸಂಪಾದನೆಗಾಗಿ ಬದಲಿ ಮಾರ್ಗಗಳನ್ನು ಹುಡುಕುವಿರಿ. ದೇಹಾರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕಾದ ಅಗತ್ಯವಿದೆ. ಕೃಷಿಕರಿಗೆ ಬೇಕಾದ ಕೃಷಿ ಸಲಕರಣೆಗಳು ಸಕಾಲಕ್ಕೆ ದೊರೆಯುತ್ತದೆ. ಪಾರಂಪರಿಕ ಬೀಜೋತ್ಪಾದನೆಗೆ ಹೆಚ್ಚು ಬೆಂಬಲ ದೊರೆತು, ಈ ಉದ್ಯಮದವರಿಗೆ ಲಾಭವಿರುತ್ತದೆ. ಮಕ್ಕಳ ಸುಖಕ್ಕಾಗಿ ಅತಿಯಾಗಿ ಖರ್ಚು ಮಾಡುವುದು ಬೇಡ. ಹಣದ ಒಳಹರಿವು ಅಗತ್ಯಕ್ಕಿಂತ ಕಡಿಮೆ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವ ಕೆಲವರಿಗೆ ಅನಿರೀಕ್ಷಿತ ಲಾಭ ಬರಬಹುದು. ಕೋರ್ಟ್‌ ಕಚೇರಿಯಲ್ಲಿನ ಕೆಲಸ ಕಾರ್ಯಗಳು ನಿಧಾನವಾಗುತ್ತದೆ. ವೃತ್ತಿಪರ ವ್ಯಾಪಾರಿಗಳಿಗೆ ಲಾಭ ಕಡಿಮೆಯಾದರೂ, ನಷ್ಟವಿರುವುದಿಲ್ಲ .

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ನಡವಳಿಕೆಯಲ್ಲಿ ಅತಿಯಾದ ಆತ್ಮಾಭಿಮಾನ ಇರುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ರಾಜಕೀಯ ಸೇರುವ ಆಲೋಚನೆ ಬರುತ್ತದೆ. ಆದರೆ ರಾಜಕೀಯ ನಾಯಕರುಗಳು ಅದಕ್ಕೆ ಸ್ಪಂದಿಸುವುದಿಲ್ಲ. ಕೃಷಿಕರಿಗೆ ಆದಾಯ ಹೆಚ್ಚು ಬರುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ಮಾತನ್ನು ಕೇಳುವ ಸಂದರ್ಭ ಕಡಿಮೆ. ನೀರಿಗೆ ಸಂಬಂಧಪಟ್ಟ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ಸಂಗಾತಿಯ ನಿಷ್ಠುರವಾದ ಮಾತು ನಿಮ್ಮನ್ನು ಕೋಪೋದ್ರಿಕ್ತರನ್ನಾಗಿ ಮಾಡುವುದಲ್ಲದೆ, ಆಲೋಚಿಸುವಂತೆಯೂ ಮಾಡುತ್ತದೆ. ಅನಿರೀಕ್ಷಿತ ಖರ್ಚುವೆಚ್ಚಗಳು ಬರಬಹುದು. ಕೃಷಿ ಕಾರ್ಮಿಕರಿಗೆ ಉತ್ತಮ ಕೆಲಸಗಳು ದೊರೆತು ಆದಾಯ ಹೆಚ್ಚುತ್ತದೆ. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಮಂದಗತಿಯ ಪ್ರಗತಿ ಇರುತ್ತದೆ. ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ ಇರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಪ್ಲಾಸ್ಟಿಕ್ ಮತ್ತು ರಬ್ಬರ್ ವ್ಯಾಪಾರ ಮಾಡುವವರಿಗೆ ಲಾಭವಿದೆ. ಉದ್ಯಮಿಗಳಿಗೆ ನುರಿತ ಕಾರ್ಮಿಕರ ಕೊರತೆ ಎದುರಾಗಬಹುದು. ನಿಮ್ಮ ಕಾರ್ಯಸಾಧನೆಗಾಗಿ ತಿರುಗಾಟ ಮತ್ತು ಗಣ್ಯರ ಭೇಟಿಯನ್ನು ಮಾಡುವಿರಿ. ನಿರುದ್ಯೋಗಿಗಳಿಗೆ ಉದ್ಯೋಗದ ಬೆಳಕು ಕಾಣುತ್ತದೆ. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ಫಲಿತಾಂಶವನ್ನು ಪಡೆಯುವ ಯೋಗವಿದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇದ್ದೇ ಇರುತ್ತದೆ. ಲೇವಾದೇವಿ ವ್ಯವಹಾರವನ್ನು ಕಡಿಮೆ ಮಾಡುವುದು ಉತ್ತಮ. ನಿಮ್ಮ ಸಲಹೆ ಸೂಚನೆಗಳಿಗೆ ಯಾವುದೇ ತಕರಾರಿಲ್ಲದೆ ಮೇಲಧಿಕಾರಿಗಳು ಒಪ್ಪಿಗೆ ಸೂಚಿಸುವರು. ಹಲವಾರು ತಂತ್ರಗಳನ್ನು ಹೆಣೆದು ನಿಮ್ಮ ಶತ್ರುಗಳನ್ನು ಮಟ್ಟ ಹಾಕುವಿರಿ. ವಿದೇಶಿ ವ್ಯವಹಾರಗಳಲ್ಲಿ ಹೆಚ್ಚು ಬಂಡವಾಳ ತೊಡಗಿಸುವುದು ಬೇಡ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಈ ಹಿಂದೆ ಕೈಗೊಂಡ ನಿರ್ಧಾರಗಳಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಂಡಲ್ಲಿ ವ್ಯವಹಾರವು ಸುಗಮವಾಗಿ ನಡೆಯುವುದು. ಆಕಸ್ಮಿಕವಾಗಿ ಪರಿಚಯವಾದ ಹೊಸ ವ್ಯಕ್ತಿಯಿಂದ ನಿಮಗೆ ಸಹಾಯ ದೊರೆಯುತ್ತದೆ. ಹಿರಿಯರು ಬದಲಾದ ಸನ್ನಿವೇಶಗಳಿಗೆ ಸ್ವಲ್ಪಮಟ್ಟಿಗೆ ಹೊಂದಿಕೆ ಮಾಡಿಕೊಳ್ಳುವುದು ಅನುಕೂಲ. ಯಾರಿಗೆ ಆದರೂ ಮಾತು ಕೊಡುವ ಮುನ್ನ ಎಚ್ಚರವಾಗಿರಿ. ಕೆಲವು ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ತಪ್ಪುವ ಭೀತಿ ಇರಬಹುದು. ನಿಮಗೆ ಮೋಸ ಮಾಡಲು ಬಂದವರು ತಾವೇ ಸಿಕ್ಕಿ ಹಾಕಿಕೊಳ್ಳುವ ಸಂದರ್ಭವಿದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಉಪಹಾರ ಗೃಹಗಳನ್ನು ನಡೆಸುವವರಿಗೆ ಆದಾಯ ಏರತೊಡಗುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಹಿರಿಯರ ಅಭಿಪ್ರಾಯದಂತೆ ಮನೆಯ ನವೀಕರಣವನ್ನು ಆರಂಭಿಸುವಿರಿ. ನೀರಾವರಿ ಕೃಷಿ ಜಮೀನನ್ನು ಖರೀದಿಸಲು ಉತ್ಸುಕತೆ ತೋರುವಿರಿ. ದಿನಸಿ ಸಗಟು ವ್ಯಾಪಾರವನ್ನು ಮಾಡಲು ಉತ್ಸಾಹ ತೋರುವಿರಿ. ನಿಮ್ಮ ವೃತ್ತಿ ಕೌಶಲವನ್ನು ತಿಳಿಯಲು ನಿಮ್ಮ ಸಹೋದ್ಯೋಗಿಯೊಬ್ಬರು ಯತ್ನ ಪಡುವರು. ನೀವು ವೃತ್ತಿ ಕೌಶಲದ ಗೌಪ್ಯವನ್ನು ಬಿಟ್ಟುಕೊಡುವುದು ನಿಮಗೆ ತೊಂದರೆಯಾಗಬಹುದು. ಆರಕ್ಷಕ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಬರುವ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ಉದ್ದಿಮೆದಾರರು ಕಾರ್ಮಿಕರ ಅತಿಯಾದ ಬೇಡಿಕೆಗಳಿಗೆ ಸ್ಪಂದಿಸದಿರುವುದು ಒಳ್ಳೆಯದು. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ನಡೆಯುತ್ತವೆ. ಅಧ್ಯಾಪಕ ವೃತ್ತಿಯಲ್ಲಿರುವವರಿಗೆ ವಿದ್ಯಾರ್ಥಿಗಳಿಂದ ಹೆಚ್ಚಿನ ಗೌರವ ದೊರೆಯುತ್ತದೆ. ಜಮೀನಿನ ಗುತ್ತಿಗೆ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಸಿಗುವ ಸೌಲಭ್ಯಗಳಲ್ಲಿ ಸ್ವಲ್ಪ ಕೊರತೆ ಇರುತ್ತದೆ. ವಿದ್ಯುತ್ ಉಪಕರಣಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಕ್ಷೀರೋತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಣೆಯಾಗಿ ಲಾಭ ಹೆಚ್ಚುತ್ತದೆ. ಉದ್ದಿಮೆದಾರರ ಯಂತ್ರಗಳ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಹೊಸ ಸ್ಥಾನ ಸಿಗುವ ಸಾಧ್ಯತೆ ಇದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಪಾಲುದಾರಿಕೆ ವ್ಯವಹಾರಗಳಲ್ಲಿ ನಿಮಗೆ ಲಾಭವಿರುತ್ತದೆ. ಕೆಲವು ಮಹಿಳೆಯರಿಗೆ ಒಡವೆಗಳನ್ನು ಕೊಳ್ಳುವ ಯೋಗವಿದೆ. ಆಕಸ್ಮಿಕ ಪ್ರಯಾಣದಲ್ಲಿ ಆರೋಗ್ಯ ಕೆಡಬಹುದು. ಜನರಲ್ಲಿ ಮಾತನಾಡುವಾಗ ಮಾತು ಅತಿರೇಕಕ್ಕೆ ಹೋಗದಂತೆ ಎಚ್ಚರವಹಿಸಿರಿ. ಪರೀಕ್ಷಾರ್ಥಿಗಳು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು ಉತ್ತಮ. ತಂತ್ರಜ್ಞರು ಹಾಗೂ ಕುಶಲಕರ್ಮಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನ ಕೊಡುವಂತೆ ಹಿರಿಯ ಅಧಿಕಾರಿಗಳಿಂದ ತೀಕ್ಷ್ಣ ಎಚ್ಚರಿಕೆ ಬರಬಹುದು. ಅನಗತ್ಯ ವಿವಾದಗಳನ್ನು ಮೇಲೆ ಎಳೆದುಕೊಳ್ಳುವುದು ಬೇಡ. ಸಂಗ್ರಹಿಸಲ್ಪಟ್ಟ ಹಣದಿಂದ ಹೊಸ ಹೂಡಿಕೆಯನ್ನು ಮಾಡುವಿರಿ. ವಿದೇಶಿ ಆಮದು-ರಫ್ತು ವ್ಯವಹಾರವನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT