ಸೊರಬ: ಡಾ.ರಾಜ್ ಕುಮಾರ್ ಕುಟುಂಬ ವನ್ನು ಜೆಡಿಎಸ್ ವರಿಷ್ಠರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಮಾಜಿ ಸಚಿವ ಎಚ್.ಹಾಲಪ್ಪ ಟೀಕಿಸಿದ್ದಾರೆ.
ಬುಧವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ತಾವು ರಾಜ್ ಕುಮಾರ್ ಅಭಿಮಾನಿ ಯಾಗಿದ್ದು, ಕರ್ನಾಟಕದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ರಾಜ್ ಕುಮಾರ್ ರಾಜಕಾರಣ ಬಿಟ್ಟು ಕೇವಲ ಕಲಾವಿದರಾಗಿ ಉಳಿದಿದ್ದರು. ಕಲೆಯೇ ಉಸಿರು ಎಂದು ಭಾವಿಸಿಕೊಂಡಿದ್ದ ರಾಜ್ ಕುಮಾರ್ ಅವರ ಸೊಸೆ ಗೀತಾ ಶಿವರಾಜ್ ಕುಮಾರ್ ಅವರನ್ನು ಮಧು ಬಂಗಾರಪ್ಪ ತಮ್ಮ ಸಹೋದರ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ತರಲು ಬಳಸಿಕೊಳ್ಳತ್ತಿರುವುದು ವಿಷಾದದ ಸಂಗತಿ ಎಂದು ದೂರಿದರು.
ವಿಧಾನಸಭಾ ಚುನಾವಣೆಯ ಫಲಿತಾಂಶ ಗಮನದಲ್ಲಿಟ್ಟುಕೊಂಡು ಶಾಸಕರು 40 ಸಾವಿರ ಮತ ಸೊರಬ ಕ್ಷೇತ್ರದಿಂದ ಜೆಡಿಎಸ್ ಪರವಾಗಿ ಬರಲಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗೊಂದು ವೇಳೆ ತಾಲ್ಲೂಕಿನಿಂದ ಜೆಡಿಎಸ್ 20 ಸಾವಿರ ಮತಗಳ ಮುನ್ನಡೆ ಪಡೆದಿದ್ದೆ ಆದರೆ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ತಿಳಿಸಿದರು.
ಜಿಲ್ಲೆಯ ಚುನಾವಣೆಯಲ್ಲಿ ಬಿಜೆಪಿಯ ಪ್ರತಿಸ್ಪರ್ಧಿ ಕಾಂಗ್ರೆಸ್ ಹೊರತು ಜೆಡಿಎಸ್ ಅಲ್ಲ ಎಂದು ವ್ಯಂಗ್ಯವಾಡಿದರು.
ಪಾಣಿ ರಾಜಪ್ಪ, ಎಂ.ನಾಗಪ್ಪ, ಮಾಜಿ ಎಪಿಎಂಸಿ ಅಧ್ಯಕ್ಷ ಗಜಾನನ ರಾವ್, ಚೌಡಪ್ಪ, ಗಣಪತಿ, ಯೋಗೇಶ್, ಪ್ರಧಾನ ಕಾರ್ಯದರ್ಶಿ ಶಿವಯೋಗಿ, ದಾನಪ್ಪ ಓಟೂರು, ಗುರುರಾಜ್ ಗುಂಜನೂರು ಇದ್ದರು.