ಅಧಿಸೂಚನೆ ಪ್ರಕಟಗೊಂಡ ದಿನವಾದ ಮಾರ್ಚ್ 19ರಂದು ಭಂಡಾರಿ ನಾಮಪತ್ರ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಪಕ್ಷ ಬಿ ಫಾರಂ ನೀಡದ ಹಿನ್ನೆಲೆಯಲ್ಲಿ ಅಂದು ಕೇವಲ ನಾಮಪತ್ರ ಮಾತ್ರ ಸಲ್ಲಿಸಿದ್ದರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕೂಡ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದರಿಂದ ಪಕ್ಷ ಭಂಡಾರಿ ಅವರಿಗೆ ‘ಬಿ’ ಫಾರಂ ನೀಡದಿದ್ದರಿಂದ ಗೊಂದಲ ನಿರ್ಮಾಣಗೊಂಡಿತ್ತು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಗುರುವಾ ರವೇ ಬಿ ಫಾರಂ ಸಿಕ್ಕಿದ್ದು, ಅಂದೇ ಚುನಾವಣಾಧಿಕಾರಿಗೆ ಸಲ್ಲಿಸುವರು ಎಂಬ ಹೇಳಿಕೆ ನೀಡಿದ್ದರಿಂದ ಇದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮಂಜುನಾಥ ಭಂಡಾರಿ, 'ಈಗಾಗಲೇ ಪಕ್ಷ ಅಧಿಕೃತವಾಗಿ ‘ಬಿ’ ಫಾರಂ ಕೊಟ್ಟಿದೆ. ತಾವು ಕೂಡ ಪಕ್ಷದ ಸೂಚನೆಯಂತೆ ನಾಮಪತ್ರ ಸಲ್ಲಿಸಿದ್ದು, ತಾವೇ ಪಕ್ಷದ ಅಭ್ಯರ್ಥಿ. ಯಾವುದೇ ಕಾರಣಕ್ಕೂ ‘ಬಿ’ ಫಾರಂ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದರು.
ಟಿಕೆಟ್ ಸಿಗದಿದ್ದರಿಂದ ಕುಮಾರ್ ಬಂಗಾರಪ್ಪ ಅವರಿಗೆ ಸ್ವಲ್ಪ ಬೇಸರವಾಗಿದೆ. ಅವರನ್ನು ಸಮಾಧಾನಪಡಿಸುವ ಕೆಲಸವನ್ನು ಮುಖಂಡರು ಮಾಡುತ್ತಿದ್ದಾರೆ. ಕುಮಾರ್ ಕೂಡ ತಮ್ಮ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.