ಶಿವಮೊಗ್ಗ: ತಾಲ್ಲೂಕಿನ ಗೆಜ್ಜೇನಹಳ್ಳಿ ಹಾಗೂ ದೇವಕಾತಿಕೊಪ್ಪದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಕ್ವಾರಿ ಮೇಲೆ ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ, ಸಿಡಿಮದ್ದುಗಳನ್ನು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲಾಖೆಯ ಅಧಿಕಾರಿ ರಶ್ಮಿ,ಭೂ ವಿಜ್ಞಾನಿ ಜ್ಯೋತಿ ಅವರ ನೇತೃತ್ವದಲ್ಲಿ ದೇವಕಾತಿಕೊಪ್ಪದ ಅರಣ್ಯ ಇಲಾಖೆ ಸರ್ವೆ ನಂ.45ರಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಒಂದು ಬಾಕ್ಸ್ ಸಿಡಿ ಮದ್ದುಗಳನ್ನು, ಒಂದು ಹಿಟಾಚಿ, ಒಂದು ಕಂಪ್ರೆಸರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.
ವಶಪಡಿಸಿಕೊಳ್ಳಲಾದ ಸಿಡಿಮದ್ದುಗಳ ಮೇಲೆ ಯಾದಗಿರಿ ಜಿಲ್ಲೆಯ ವಿಳಾಸವಿದ್ದು, ಈ ಸಿಡಿಮದ್ದು ತಯಾರಿಕಾ ಘಟಕದ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.