ಕೆರೂರ: ಇಲ್ಲಿಗೆ ಸಮೀಪದ ಹಳಗೇರಿ ಬಳಿ ಕಬ್ಬಿನ ತೋಟದಲ್ಲಿ ಕೊಳವೆಬಾವಿ ಕೊರೆಸುತ್ತಿದ್ದ ವೇಳೆ ಆಕಸ್ಮಿಕ ವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೋರವೆಲ್ ವಾಹನ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಶುಕ್ರ ವಾರ ಮಧ್ಯಾಹ್ನ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆ ಪಕ್ಕದ ಕಬ್ಬಿನ ಗದ್ದೆಗೂ ತಗುಲಿ ಅಂದಾಜು 6 ಎಕರೆ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟಿದ್ದು ಅನಾಹುತದಲ್ಲಿ ಅಂದಾಜು 1.20 ಕೋ,ರೂ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸಮೀಪದ ಉಗಲವಾಟದ ರಮೇಶ ಹಿರೇಮಠ ಎಂಬುವವರ ತೋಟದಲ್ಲಿ ಕೊಳವೆ ಬಾವಿಗೆ ಕೇಸಿಂಗ್ ಇಳಿಸುತ್ತಿ ದ್ದಾಗ ಈ ಅನಾಹುತ ನಡೆದಿದೆ. ಮೊದಲು ಬೋರವೆಲ್ (ಕೆ.ಎ-51 ಎಂ.ಬಿ 9138) ವಾಹನಕ್ಕೆ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಕಾಳ್ಗಿಚ್ಚಿನಂತೆ ಸುತ್ತ ಮುತ್ತಲೂ ವ್ಯಾಪಿಸಿದೆ. ನೋಡ ನೋಡುತ್ತಿದ್ದಂತೆ ಪಕ್ಕದ ಕೆರೂ ರಿನ ವರ್ತಕಎಸ್.ಕೆ. ಕಂದಕೂರ ಅವರ ಕಬ್ಬಿನ ತೋಟಕ್ಕೂ ವ್ಯಾಪಿಸಿದ ಬೆಂಕಿಯ ಕೆನ್ನಾಲಗೆಯಲ್ಲಿ 6 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಸುಟ್ಟು ಹೋಯಿತು.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ಬಂದಿತಾದರೂ ಅಷ್ಟರಲ್ಲಿ ಬೋರವೆಲ್ ವಾಹನ ಬಹುತೇಕ ಸುಟ್ಟು ಹೋಗಿತ್ತು.ಕೆಲವೆಡೆ ಕಬ್ಬಿನ ಬೆಳೆ ನಂದಿಸಲು ಮಾತ್ರ ಸಾಧ್ಯವಾಯಿತು.ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂಬುದೇ ಸಮಾಧಾನದ ಅಂಶ.
ಸ್ಫೋಟಕ್ಕೆ ಹೆದರಿ ಓಡಿದರು
ಬೋರವೆಲ್ ಹಾಗೂ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ ಸುದ್ದಿ ಎಲ್ಲೆಡೆ ಹಬ್ಬುತ್ತಿ ದ್ದಂತೆ ಕೆರೂರ, ಉಗಲವಾಟ, ಹಳಗೇರಿ, ಮಮ್ಮಟಗೇರಿ ಇತರೆಡೆಯಿಂದ ಘಟನೆ ವೀಕ್ಷಿಸಲು ನೂರಾರು ಸಂಖ್ಯೆ ಯಲ್ಲಿ ಜನ ಜಮಾಯಿಸಿದ್ದರು.ಆಗ ವಾಹನದ ಡೀಸೆಲ್ ಮತ್ತು ಗಾಳಿ ಸಂಗ್ರಹದ ಟ್ಯಾಂಕ್ಗಳು ಬೆಂಕಿಯಲ್ಲಿ ಉರಿದು ಒಮ್ಮೆಗೇ ಬಾಂಬು ಬಿದ್ದಂತೆ ಸ್ಫೋಟಗೊಂಡವು.
ಸಹಜವಾಗಿ ನೋಡುತ್ತಿದ್ದ ಜನತೆ ಹೆದರಿ ದಿಕ್ಕಾ ಪಾಲಾಗಿ ಓಡಿ ಹೋದರು. ಸ್ಫೋಟದ ತೀವ್ರತೆಗೆ ಸುಮಾರು 50 ಅಡಿಗೂ ಹೆಚ್ಚು ದೂರ ವಾಹನದ ಅವಶೇಷ ಗಳು ಸಿಡಿದು ಬಿದ್ದವು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ಅನಾಹುತದ ಬಗ್ಗೆ ವಿವರಿಸಿದರು.
ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಕಬ್ಬಿನ ಬೆಳೆ ಏಕಾ ಏಕಿ ಬೆಂಕಿಗೆ ಆಹುತಿಯಾಗಿದ್ದು ಆ ರೈತನ ದುಸ್ಥಿತಿ ನೆನೆದು ಅನೇಕ ಕೃಷಿಕರು ಮರುಕಪಡುತ್ತಿದ್ದ ದೃಶ್ಯ ಕಂಡು ಬಂದಿತು.
ಪರಿಹಾರಕ್ಕೆ ಆಗ್ರಹ
ಆಕಸ್ಮಿಕ ಬೆಂಕಿಯಲ್ಲಿ 6 ಎಕರೆ ಕಬ್ಬು ಸುಟ್ಟು ಹೋಗಿದ್ದು ಇದರಿಂದ ಅಪಾರ ಹಾನಿ ಅನು ಭವಿಸಿರುವ ರೈತರಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕೆಂದು ರೈತ ಸಂಘ, ಕೃಷಿ ಪ್ರಮುಖರು ಒತ್ತಾಯಿಸಿದ್ದಾರೆ.
ಬೋರವೆಲ್ ಮಾಲೀಕ ಗದ್ದನಕೇರಿ ಕ್ರಾಸಿನ ಹೇಮರೆಡ್ಡಿ ರಾಯರೆಡ್ಡಿ ನೀಡಿದ ದೂರಿನನ್ವಯ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.