ಮುಧೋಳ: ಗ್ರಾಮ ಪಂಚಾಯ್ತಿ, ಆಶಾ, ಅಂಗನವಾಡಿ, ಬಿಸಿಯೂಟ ಸಿಬ್ಬಂದಿಯ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಸಿಬ್ಬಂದಿಗಳ ಒಕ್ಕೂಟದ ಪದಾಧಿಕಾರಿಗಳು ತಾಲ್ಲೂಕು ಪಂಚಾಯ್ತಿ ಇಒ ಅವರ ಮೂಲಕ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಮನಗಾಂವಿ, ಪಂಚಾಯ್ತಿಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆಯಾಗಿಲ್ಲ ಹಾಗೂ ಅನುದಾನ ಕಡಿತ ಸಹ ಮಾಡಲಾಗಿದೆ. ರೈತ, ಕಾರ್ಮಿಕ ವಿರೋಧಿ ಮಸೂದೆಗಳನ್ನು ಜಾರಿಗೆ ತರಲಾಗಿದೆ.
ಶಿಕ್ಷಣ, ಆರೋಗ್ಯ, ರೈಲ್ವೆ, ಹೆಸ್ಕಾಂ, ಬಿಸ್ಎನ್ಎಲ್, ವಿಮಾ ಬ್ಯಾಂಕ್ ಸೇರಿದಂತೆ ನಾನಾ ಇಲಾಖೆಗಳನ್ನು ಖಾಸಗೀಕರಣ ಮಾಡಬಾರದು. ಸಿಬ್ಬಂದಿ ಸಂಬಳ ನಿಯಮಿತವಾಗಿ ನೀಡಬೇಕೆಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಶರ್ಮಿಳಾ ಸ್ವಾಮಿ ಮಾತನಾಡಿ, ಎಲ್ಲ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ತಾಲ್ಲೂಕು ಪಂಚಾಯಿತಿ ಇಒ ಪರವಾಗಿ ಸಹಾಯಕ ನಿರ್ದೇಶಕ ವಿವೇಕ ಬಿರಾದಾರ ಮನವಿ ಸ್ವೀಕರಿಸಿದರು.
ಸುಭಾಸ ಹಾದಿಮನಿ, ಹನಮಂತ ಬಂದಿ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶೀಲಾ ಮೆಳ್ಳಿಗೇರಿ, ರುಕ್ಸಾನಾ ನಾಗಠಾಣ, ಬಿಸಿಯೂಟ ಸಿಬ್ಬಂದಿ ಅಧ್ಯಕ್ಷೆ ಜ್ಯೋತಿ ಕಾಟೆ, ಮಾಲಾ ನಾಗರಾಳ, ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟದ ಅಧ್ಯಕ್ಷೆ ಶರ್ಮಿಳಾ ಸ್ವಾಮಿ, ಶಕುಂತಲಾ ಕಾಳವಾರ ನೂರಾರು ಜನರ ಭಾಗವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.