ಕೊಣ್ಣೂರ: ಸಮೀಪದ ಮರೆಗುದ್ಧಿ ಗ್ರಾಮದ ಕಂಬಾರ ಕುಟುಂಬದ ಬಸವರಾಜ ಮತ್ತು ಗಂಗಾಧರ ಸಹೋದರರು ಶಿಲ್ಪಕಲೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪೂರ್ವಜರಿಂದ ವಂಶಪರಂಪರೆಯಾಗಿ ಬಂದಿರುವ ಕಂಬಾರಿಕೆ ವೃತ್ತಿಯ ಜೊತೆಗೆ ಶಿಲ್ಪಕಲೆಯಲ್ಲೂ ವಿಶೇಷ ಪರಿಣಿತಿ ಪಡೆದಿದ್ದಾರೆ.
ಬಸವರಾಜ ಕಂಬಾರ ಅವರ ಕಲೆಯನ್ನು ನೋಡಿ ರಾಜ್ಯ ಸರ್ಕಾರ, ಅವರನ್ನು ಶಿಲ್ಪಕಲಾ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿದೆ. ಜೊತೆಗೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕಲ್ಲನ್ನು ತಮ್ಮ ಕೈಚಳಕದಿಂದ ನೋಡುಗರ ಮನಸೆಳೆವ ಮೂರ್ತಿಗಳನ್ನಾಗಿ ರೂಪಿಸುವಲ್ಲಿ ಸಹೋದರರು ಸಿದ್ಧಹಸ್ತರು. ಇಲ್ಲಿಯವರೆಗೆ ದೊಡ್ಡ ಹಾಗೂ ಸಣ್ಣ ಗಾತ್ರದ 355 ಮೂರ್ತಿಗಳನ್ನು ರೂಪಿಸಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿದ್ದಾರೆ.
ಬಸವರಾಜ ಪಾಂಡುರಂಗ ಕಂಬಾರ ಅವರಿಗೆ 2014 ರಲ್ಲಿ ಕರ್ನಾಟಕ ರತ್ನ ಶ್ರೀ ಪ್ರಶಸ್ತಿ ಸಂದಿದೆ. ರಾಜ್ಯದ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
‘ನಮ್ಮ ಪೂರ್ವಜರಿಂದ ಕೊಡುಗೆಯಾಗಿ ಬಂದ ಉದ್ಯೋಗವನ್ನು ಮುಂದುವರೆಸಿಕೊಂಡು ನಿಷ್ಠೆಯಿಂದ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದು ಬಸವರಾಜ ಕಂಬಾರ ಹೇಳುತ್ತಾರೆ.