ಜಮಖಂಡಿ: ನಾಗರ ಪಂಚಮಿ ದಿನದಂದು ಶಿವಾನಂದ ಶ್ರೀಗಳ ಜನ್ಮದಿನದ ಅಂಗವಾಗಿ ಗ್ರಾಮದ ಶಿವಾನಂದ ಮಠದ ಗುರುಪ್ರಸಾದ ಶ್ರೀಗಳ ನೇತೃತ್ವದಲ್ಲಿ ಗ್ರಾಮದ ಯುವಕರು ಕೃಷ್ಣಾ ನದಿಯಲ್ಲಿ ತೆಪ್ಪದ ರಥೋತ್ಸವ ಆಚರಿಸಿದರು.
ತಾಲ್ಲೂಕಿನ ಮೈಗೂರ ಗ್ರಾಮದಲ್ಲಿ ಕಳೆದ ಮರ್ನಾಲ್ಕು ದಶಕಗಳಿಂದ ಈ ರಥೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಗ್ರಾಮದ ಗ್ರಾಮಸ್ಥರು ನದಿಯಲ್ಲಿ ತೆಪ್ಪದ ರಥೋತ್ಸವ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಮಠದಲ್ಲಿ ಪಲ್ಲಕ್ಕಿಯನ್ನು ಅಲಂಕರಿಸಿ ಪೂಜೆ ಸಲ್ಲಿಸಿ ಸಕಲ ವಾದ್ಯ–ಮೇಳದೊಂದಿಗೆ ಕೃಷ್ಣಾ ನದಿಯವರೆಗೆ ಪಲ್ಲಕ್ಕಿ ಉತ್ಸವ ನಡೆಸಿ, ನಂತರ ನದಿಯಲ್ಲಿನ ಬೋಟ್ನಲ್ಲಿ ತೆಪ್ಪದ ರಥೋತ್ಸವ ನಡೆಸಿ ಗಮನ ಸೆಳೆದರು. ರಥದಲ್ಲಿ ಶಿವಾನಂದ ಶ್ರೀಗಳ, ಮಲ್ಲಿಕಾರ್ಜುನ ಶ್ರೀಗಳ ಭಾವಚಿತ್ರದ ಜೋತೆ ಗ್ರಾಮಸ್ಥರು ಸುಮಾರು ಮೂರಾಲ್ಕು ಕಿ.ಮೀನಷ್ಟು ನದಿಯಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕಿ ರಥೋತ್ಸವ ನಡೆಸಿ ಗ್ರಾಮದ ಚಾವಡಿ ಹತ್ತಿರ ಗ್ರಾಮಸ್ಥರು ತೆಪ್ಪದ ರಥವನ್ನು ಅರತಿ ಪೂಜೆಯೊಂದಿಗೆ ಬರಮಾಡಿಕೊಂಡರು.
ನಂತರ ನದಿಯಿಂದ ಶ್ರೀಮಠದವರೆಗೆ ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ ಮಹಿಳೆಯರು ದಾರಿಯುದ್ದಕ್ಕೂ ನೀರು ಹಾಕಿ ಪೂಜೆ ಸಲ್ಲಿಸಿ ಸಿಹಿ ನೈವೇದ್ಯ ನೀಡಿದರು.
ಗುರುಪ್ರಸಾದ ಮಾತನಾಡಿ ಮೊದಲು ಬಾಳೆದಿಂಡಿನಿಂದ ತೆಪ್ಪ ತಯಾರಿಸಿ ತುಂಬಿ ಹರಿಯುವ ನದಿಯಲ್ಲಿ ರಥೋತ್ಸವ ಆಚರಿಸಲಾಗುತ್ತಿತ್ತು. ಆದರೆ ಕೆಲ ವರ್ಷಗಳ ಹಿಂದೆ ತೆಪ್ಪ ಹರಿದು ಸಮಸ್ಯೆ ಉಂಟಾಗಿತ್ತು. ಇದರಿಂದ ಗ್ರಾಮಸ್ಥರು ಗ್ರಾಮದ ದೋಣಿಯಲ್ಲಿ ರಥೋತ್ಸವ ಆಚರಿಸುತ್ತಿದ್ದಾರೆ. ಪರಂಪರೆಯಿಂದ ಬಂದ ಸಂಪ್ರದಾಯವನ್ನು ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀ, ಮಲ್ಲು ಪಾಟೀಲ, ರಾಜು ಆಜೂರ, ರಾಮಪ್ಪ ಅಂಬಿ, ಶ್ರೀಶೈಲ ಮಠಪತಿ, ಸುನೀಲ ಕಾರಜೋಳ, ಮಹಾಂತೇಶ ತೆಲಸಂಗ, ಮೆಳೆಪ್ಪ ಮಿರ್ಜಿ, ಗುರು ಪಾಟೀಲ, ಈರಗೊಂಡ ಭಿಮನಹಳ್ಳಿ, ಧರನೇಂದ್ರ ನ್ಯಾಮಗೌಡ, ಅಪ್ಪಾಸಾಬ ಅಂಬಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.