ರಾಂಪುರ: ಜನಪ್ರತಿನಿಧಿಗಳ ನಿಷ್ಕಾಳಜಿ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದ ಹೊರವಲಯದಲ್ಲಿ ನಿರ್ಮಾಣ ಮಡಲಾದ ಸರ್ಕಾರಿ ಪ್ರವಾಸಿ ಮಂದಿರ ಪಾಳು ಬಿದ್ದಿದೆ.
ಶಿರೂರ-ಸಂಗಮಕ್ರಾಸ್ ರಸ್ತೆ(ಚತುಷ್ಪತ)ಯಲ್ಲಿ ಶಿರೂರ ಪಟ್ಟಣದಿಂದ 2 ಕಿಲೋ ಮೀಟರ್ ಅಂತರದಲ್ಲಿ ಒಂದು ಎಕರೆ ಜಾಗೆಯಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರವಾಸಿ ಮಂದಿರ ಈತನಕ ಬಳಕೆಯಾಗಿಲ್ಲ.
ಬಾಗಲಕೋಟೆ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಈ ಪ್ರವಾಸಿ ಮಂದಿರ 2018ರಲ್ಲಿಯೇ ಪೂರ್ಣಗೊಂಡು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಇದಕ್ಕೂ ಚಾಲನೆ ನೀಡಿದ್ದರು.
ನಂತರ ನಡೆದ ಚುನಾವಣೆಯಲ್ಲಿ ಇದರ ನಿರ್ಮಾಣಕ್ಕೆ ಕಾರಣರಾಗಿದ್ದ ಅಂದಿನ ಶಾಸಕ ಎಚ್.ವೈ.ಮೇಟಿ ಸೋತರು. ಹೊಸದಾಗಿ ಆಯ್ಕೆಯಾದ ಶಾಸಕರು ಈ ಪ್ರವಾಸಿ ಮಂದಿರದ ಗೋಜಿಗೆ ಹೋಗಲಿಲ್ಲ. ಹಾಳಾಗಿ ಹೋಗುವ ಹಂತದಲ್ಲಿದೆ.
ನಿರ್ವಹಣೆ ಮಾಡದಿರುವುದರಿಂದ ಕಿಟಕಿಗಳಿಗೆ ಹಾಕಿರುವ ಗ್ಲಾಸು ಒಡೆದಿವೆ. ನೀರಿನ ಸಿಂಟೆಕ್ಸ್ ಒಡೆದಿದೆ. ನಳ ಕಿತ್ತು ಹಾಕಲಾಗಿದೆ. ಜೇನುಹುಳಗಳು ನೆಲಯೂರಿವೆಯಲ್ಲದೇ ಎಲ್ಲೆಂದರಲ್ಲಿ ಮುಳ್ಳು ಕಂಟಿ, ಹುಲ್ಲು ಬೆಳೆದು ಆವರಣದಲ್ಲಿ ಕಾಲಿಡದಂತಹ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ತಂತಿ ಕಿತ್ತು ಹಾಕಿದ್ದು, ಬೆಳಕಿನ ವ್ಯವಸ್ಥೆಯೂ ಇಲ್ಲದಂತಾಗಿದೆ.
ನೆಲಹಾಸಿಗೆ(ಪ್ಲೋರಿಂಗ್)ಯೂ ಹಾಳಾಗಿದೆ. ಹಕ್ಕಿ, ಪಕ್ಷಿಗಳ ತಾಣವಾಗಿದ್ದು. ಯಾರೂ ಇದರತ್ತ ಸುಳಿಯದಂತಹ ಸ್ಥಿತಿಯಿದೆ.
ನಾಮಫಲಕವೂ ಇಲ್ಲ: ಓ ಕಟ್ಟಡಕ್ಕೆ ಈತನಕ ಪ್ರವಾಸಿ ಮಂದಿರ ಅನ್ನುವ ನಾಮಫಲಕವನ್ನು ಸಹ ಹಾಕಿಲ್ಲ. ಹೀಗಾಗಿ ನಿತ್ಯ ಇದರತ್ತ ಕಣ್ಣು ಹಾಯಿಸಿ ಸಾಗುವ ಜನ ಈ ಕಟ್ಟಡ ಯಾವುದು ಎಂಬ ಪ್ರಶ್ನೆ ಎದುರಾಗುತ್ತದೆ. ಕಾವಲುಗಾರನನ್ನು ನೇಮಿಸಿರುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಸದಾ ಗೇಟು ಕೀಲಿ ಹಾಕಿರುತ್ತದೆ ಎನ್ನುತ್ತಾರೆ ಸ್ಥಳೀಯರು.
ಈ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಶಾಸಕರಾಗಿದ್ದ ಎಚ್.ವೈ.ಮೇಟಿ ಅವರೇ ಈಗ ಮತ್ತೇ ಕ್ಷೇತ್ರದ ಪ್ರತಿನಿಧಿ. ಕೂಡಲೇ ಇದಕ್ಕೊಂದು ಕಾಯಕಲ್ಪ ನೀಡಬೇಕು ಎಂಬುದು ಜನರ ಆಗ್ರಹ.
ಶೀಘ್ರದಲ್ಲೇ ಪ್ರವಾಸಿ ಮಂದಿರ ಸುಸಜ್ಜಿತಗೊಳಿಸಿ ಪ್ರವಾಸೋದ್ಯಮ ಇಲಾಖೆಗೆ ನೀಡುವ ಕುರಿತು ನಿರ್ಧರಿಸಲಾಗುವುದು.ಎಚ್.ವೈ. ಮೇಟಿ ಶಾಸಕ ಬಾಗಲಕೋಟೆ.
ಪ್ರವಾಸಿ ಮಂದಿರದ ದುರಸ್ತಿ ಕುರಿತು ತಿಳಿಸಿದ್ದು ಅಂದಾಜು ಪತ್ರಿಕೆ ತಯಾರಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.–ರವೀಂದ್ರ ಕುಂಬಾರಎಇಇ ಲೋಕೋಪಯೋಗಿ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.