ಹುನಗುಂದ: ಪಂಚಾಯತ್ ರಾಜ್ ವ್ಯವಸ್ಥೆ ಆರಂಭಿಸಿದ್ದು, ಬಲಪಡಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹುನಗುಂದ ಮತ್ತು ಇಳಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯ್ತಿ, ಪಿಕೆಪಿಎಸ್ ಅಧ್ಯಕ್ಷ ಹಾಗೂ ಉಪಾದ್ಯಕ್ಷರಿಗೆ ಸನ್ಮಾನ ಸಮಾರಂಭ ಹಾಗೂ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸನ್ನು ಸಾಕಾರಗೊಳಿಸಿ ಪಂಚಾಯ್ತಿ ಹಂತದ ವರೆಗೆ ಅಧಿಕಾರ ವಿಕೇಂದ್ರೀಕರಣ ಮಾಡಿದ ಶ್ರೇಯಸ್ಸು ಪಕ್ಷಕ್ಕಿದೆ. ನಿಮಗೆ ಜನರಿತ್ತ ಅಧಿಕಾರಕ್ಕೆ ಸೂಕ್ತ ನ್ಯಾಯ ಒದಗಿಸಿ ಎಂದು ಹೇಳಿದರು.
ಹುನಗುಂದ-ಇಳಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ ದೊಡ್ಡಮನಿ ಹಾಗೂ ಅಬ್ದುಲ್ ರಜಾಕ್ ತಟಗಾರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೀಣಾ ಕಾಶಪ್ಪನವರ, ವಿಜಯ ಗದ್ದನಕೇರಿ, ಮಹಾಂತೇಶ ಅವಾರಿ, ಜಬ್ಬಾರ ಕಲ್ಬುರ್ಗಿ ಮಾತನಾಡಿದರು.
ಪಟ್ಟಣದ ಪಿಕೆಪಿಎಸ್ ಅಧ್ಯಕ್ಷ ದೇವು ಡಂಬಳ, ಸಹಕಾರಿ ಸಂಘದಲ್ಲಿ ಆರಂಭದ ಸಾಲವಾಗಿ ಪ್ರತಿ ರೈತನಿಗೆ ₹50 ಸಾವಿರ ಮಾತ್ರ ನೀಡುತ್ತಿದ್ದು, ಅದನ್ನು ಒಂದು ಲಕ್ಷಕ್ಕೆ ಹೆಚ್ಚಿಸುವಂತೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಾಸಕ ವಿಜಯಾನಂದ ಕಾಶಪ್ಪನವರಲ್ಲಿ ಮನವಿ ಮಾಡಿಕೊಂಡರು.