ಬಾಗಲಕೋಟೆ: ಜಿಲ್ಲೆಯಲ್ಲಿ ಯಾವುದೇ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸರ್ಕಾರಿ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಂದ ಕಮೀಷನ್ ಪಡೆದಿಲ್ಲ ಎಂದು ಜಿಲ್ಲೆಯ ಗುತ್ತಿಗೆದಾರರ ಮುಖಂಡ ಅಪ್ಪಣ್ಣ ರೂಗಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಮಗಾರಿಗಳ ಗುತ್ತಿಗೆ ನೀಡಲು ಶೇ 40 ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಿರುವ ದೂರು ರಾಜಕೀಯ ಪ್ರೇರಿತವಾಗಿದೆ. ಅದರಲ್ಲಿ ಯಾವುದೇ ಹುರುಳು ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಮಿಷನ್ ಕೊಡಿ ಎಂದು ಯಾವುದೇ ಜನಪ್ರತಿನಿಧಿ ಇಲ್ಲವೇ ಅಧಿಕಾರಿ ನಮ್ಮ ಮೇಲೆ ಒತ್ತಡ ಹೇರುತ್ತಿಲ್ಲ. ಆದರೂ ಆ ರೀತಿ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ. ರಾಜ್ಯ ಗುತ್ತಿಗೆದಾರರ ಸಂಘದಿಂದ ಬರೆದಿರುವ ಪತ್ರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಹೀಗೆ ಮಾಧ್ಯಮಗಳಿಗೆ ಹೇಳಿಕೆ ನೀಡುವಂತೆ ನಮ್ಮ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅಪ್ಪಣ್ಣ ಪ್ರತಿಕ್ರಿಯಿಸಿದರು.
ಗುತ್ತಿಗೆ ಕಾಮಗಾರಿಗೆ ವಿಧಿಸುವ ಜಿಎಸ್ಟಿ ಪ್ರಮಾಣ ಕೂಡ ಹೆಚ್ಚಾಗಿದೆ. ಅದನ್ನು ಕಡಿಮೆ ಮಾಡಬೇಕು. ಕಳೆದ ವರ್ಷದ ಕಾಮಗಾರಿಗಳ ಬಿಲ್ ಇನ್ನೂ ಪಾವತಿಸಿಲ್ಲ. ಅದನ್ನು ಕೊಡಲು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಬಾಕಿ ಉಳಿಸಿಕೊಂಡಿರುವ ಎಲ್ಲ ಬಿಲ್ ಪಾವತಿಸಲು ಸಂಬಂಧಿಸಿದವರಿಗೆ ಸೂಚಿಸಲು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರಾದ ಬಿ.ಜಿ.ಯಡಹಳ್ಳಿ, ವೆಂಕಣ್ಣ ನಾಯಕ, ಎಫ್.ಎನ್.ಪಾಟೀಲ, ವೆಂಕಣ್ಣ ದ್ಯಾಮಣ್ಣವರ್ ಇದ್ದರು.