ಬಾಗಲಕೋಟೆ:ಹಡಪದ ಕ್ಷೌರಿಕ ಅಭಿವೃದ್ಧಿ ನಿಗಮ ಆರಂಭಿಸುವಂತೆ ಮುಂಬರುವ ವಿಧಾನಸಭೆ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಒತ್ತಡ ಹೇರಲು ಮಂಗಳವಾರ ಇಲ್ಲಿ ನಡೆದಹಡಪದ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆ ತೀರ್ಮಾನಿಸಿತು.
ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾರಾವ ನರಿಬೋಳ ನೇತೃತ್ವದಲ್ಲಿನಗರದ ಅನುಗ್ರಹ ಹೋಟೆಲ್ನಲ್ಲಿ ಮಂಗಳವಾರ ಕಾರ್ಯಕಾರಿಣಿ ಸಭೆ ನಡೆಯಿತು.
‘ತಳಸಮುದಾಯಗಳನ್ನು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ವಿವಿಧ ಸಮುದಾಯಗಳ ಅಭಿವೃದ್ಧಿಗೆ ನಿಗಮಗಳ ರಚನೆ ಮಾಡಿದೆ. ಅದೇ ರೀತಿ ಹಡಪದ ಕ್ಷೌರಿಕ ಅಭಿವೃದ್ಧಿ ನಿಗಮದ ಆರಂಭಕ್ಕೂ ಮುಂದಾಗಲಿ. ಆ ನಿಟ್ಟಿನಲ್ಲಿ ಸಮಾಜದವರು ಒಗ್ಗಟ್ಟಿನಿಂದ ಪ್ರಯತ್ನ ಆರಂಭಿಸೋಣ‘ ಎಂಬ ಕೂಗು ಸಭೆಯಲ್ಲಿ ಕೇಳಿಬಂದಿತು.
ಸಮಾಜದ ಅಸ್ಮಿತೆಯ ನೆಲೆಯಾದ ಶಿವಶರಣ ಹಡಪದ ಅಪ್ಪಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆ ಮಸಿಬಿನಾಳದ ಮನೆಯನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಜೀರ್ಣೋದ್ಧಾರ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲು ಸಭೆ ಸರ್ವಾನುಮತದಿಂದ ನಿರ್ಣಯಿಸಿತು.
ಸಮಾಜದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಎಚ್.ಡಿ. ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜುಲೈ 16ರಂದು ರಾಜ್ಯ ಸರ್ಕಾರ ಹಡಪದ ಅಪ್ಪಣ್ಣನವರ ಜಯಂತಿಯನ್ನು ಬೆಂಗಳೂರಿನಲ್ಲೇ ಆಚರಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಈ ಬೇಡಿಕೆಗಳು ಈಡೇರದಿದ್ದಲ್ಲಿ ರಾಜ್ಯದಾದ್ಯಂತ ಹಡಪದ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು. ವಿಧಾನಮಂಡಲದ ಅಧಿವೇಶನದಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳದಿದ್ದರೆ ಮಸಿಬಿನಾಳ ಗ್ರಾಮದಿಂದ ಬೆಳಗಾವಿ ಚಲೋ ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಲ್ಲಿಕಾರ್ಜುನ ಹಡಪದ, ಮಲ್ಲಿಕಾರ್ಜುನ ಬಿಸಲದಿನ್ನಿ, ಅಶೋಕ ಹಡಪದ, ಭಾರತಿ ಹಡಪದ, ಮಹಾರುದ್ರಪ್ಪ ಪಡೇಸೂರ, ಉಳವಪ್ಪ ಹಡಪದ, ಬಸವರಾಜ ಹಡಪದ ಬೆಳಗಾವಿ, ಸುರೇಶ ಹಡಪದ, ವೀರಣ್ಣ ಚಿಕ್ಕಬೆಳ್ಳಕಟ್ಟಿ ಇದ್ದರು.