ಕೆರೂರ: ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಭಾಗದಲ್ಲಿ ಭಾನುವಾರ ಮಧ್ಯಾಹ್ನ ಅರ್ಧ ತಾಸಿಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿಯಿತು.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮೊದಲ ಬಾರಿಗೆ ಆಲಿಕಲ್ಲಿನೊಂದಿಗೆ ಸುರಿದ ಈ ಬಿರು ಮಳೆಗೆ ಗುಡುಗು–ಸಿಡಿಲಿನ ಆರ್ಭಟವೂ ಸಾಥ್ ನೀಡಿತ್ತು. ಅಡಿಕೆ ಕಾಯಿಗಿಂತಲೂ ದೊಡ್ಡ ಗಾತ್ರದ ಆಲಿಕಲ್ಲು ಮಳೆ ನೀರಿನೊಂದಿಗೆ ಬಿದ್ದು ಸ್ಥಳೀಯ ನಿವಾಸಿಗಳಲ್ಲಿ ಅಚ್ಚರಿ ಮೂಡಿಸಿದವು.
ಹಲವರು ಮಳೆಯಲ್ಲೇ ಆಲಿಕಲ್ಲುಗಳನ್ನು ಊಟದ ತಟ್ಟೆ, ಬೊಗಸೆಯಲ್ಲಿ ಹಿಡಿದು ತಂದರೆ ಮಕ್ಕಳು ಅವುಗಳನ್ನು ಬೆರಗುಗಣ್ಣುಗಳಿಂದ ನೋಡಿ, ಆಲಿಕಲ್ಲು ಹಿಡಿದು ಆಟವಾಡುತ್ತಾ ಖುಷಿಪಟ್ಟರು.
’ಮಳೆ ಜೊತೆಗೆ ಬಿರುಸಾಗಿ ಆಲಿಕಲ್ಲುಗಳ ಬಿದ್ದಾಗ ಪತ್ರಾಸ್ ಮನೆಗಳ ಛಾವಣಿ ಮೇಲೆ ರಪ, ರಪನೆ ದೊಡ್ಡ ಮಟ್ಟದ ಸಪ್ಪಳ ಕೇಳಿ ಬಂದಿತು. ಹೊರಗೆ ಬಂದು ನೋಡಿದಾಗ ದೊಡ್ಡ ಗಾತ್ರದ ಆಲಿಕಲ್ಲುಗಳ ಮರಗಳ ಬುಡದಲ್ಲಿ ಬಿದ್ದುದನ್ನು ಕಂಡೆವು‘ ಎಂದು ಸಮೀಪದ ಹಾಲಿಗೇರಿ ಗ್ರಾಮದ ಶೇಖರ ಕಂಕಣವಾಡಿ ಹೇಳಿದರು.
ಕೆಲವರು ಆಲಿಕಲ್ಲುಗಳನ್ನು ತಟ್ಟೆ, ಚೀಲಗಳಲ್ಲಿ ಸಂಗ್ರಹಿಸಿ ಫೋಟೊ, ವಿಡಿಯೊ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ಖುಷಿಪಟ್ಟರು. ಮುಂಗಾರು ಹಂಗಾಮಿಗೂ ಮುನ್ನ ಮಳೆ ಸುರಿದಿದೆ. ಹೀಗಾಗಿ ತಮ್ಮ ಹೊಲಗಳನ್ನು ಬಿತ್ತನೆಗೆ ಹದಗೊಳಿಸಿದ್ದ ರೈತರ ಮೊಗದಲ್ಲಿ ಸಂತಸ ಕಂಡುಬಂದಿದೆ.
ಕೆರೂರ ಹೋಬಳಿ ಸುತ್ತಮುತ್ತಲಿನ ಬೆಳಗಂಟಿ, ಹಾಲಿಗೇರಿ, ರ.ತಿಮ್ಮಾಪುರ, ಚಿಂಚಲಕಟ್ಟಿ, ನರೇನೂರ ಗ್ರಾಮಗಳಲ್ಲಿ ಮಳೆ ಸುರಿದಿದೆ.