ಬಾಗಲಕೋಟೆ: ದೇಶದಲ್ಲಿ ದೇಶದ್ರೋಹಿ ಹೇಳಿಕೆಗಳು, ಕೃತ್ಯಗಳು ಹೆಚ್ಚುತ್ತಿವೆ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಆಗ್ರಹಿಸಿ ವಿಶ್ವ ಹಿಂದೂಪರಿಷತ್ ಹಾಗೂ ವಿದ್ಯಾಗಿರಿ ಗೆಳೆಯರ ಬಳಗದಿಂದ ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವು ಮೇಲ್ನಾಡ ಮಾತನಾಡಿ, ಹುಬ್ಬಳ್ಳಿಯಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಎಎ ವಿರೋಧಿ ಸಭೆಯಲ್ಲಿ ಅಮೂಲ್ಯಾ ಲಿಯೋನ್ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿ ರಾಷ್ಟ್ರದ್ರೋಹದ ಕೆಲಸ ಮಾಡಿದ್ದಾರೆ. ಆರ್ದ್ರಾ ಎಂಬ ಹುಡುಗಿ ದೇಶ ವಿರೋಧಿ ಘೋಷಣೆಗಳನ್ನು ಒಳಗೊಂಡ ಫಲಕ ಪ್ರದರ್ಶಿಸಿದ್ದಾರೆ. ಇಂತಹ ಕೆಲಸ ಮಾಡಿದವರನ್ನು ಅವರು ಜಿಂದಾಬಾದ್ ಹೇಳಿದ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಇಂತಹ ದೇಶದ್ರೋಹದ ಕೃತ್ಯಗಳಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಎಚ್ಚರಿಕೆ ಆಗುವಂತೆ ಈಗಾಗಲೇ ಬಂಧಿತರಾದವರನ್ನು ಶಿಕ್ಷಿಸಬೇಕು. ಆಗ ಇಂತಹ ಕಾರ್ಯಗಳು ಮರುಕಳಿಸುವುದಿಲ್ಲ. ದೇಶ ವಿರೋಧಿ ಕೃತ್ಯಗಳಿಗೆ ಬೆಂಬಲ ನೀಡುವವರನ್ನು ಗುರುತಿಸಿ ಅವರಿಗೆ ಶಿಕ್ಷೆ ವಿಧಿಸುವ ಕೆಲಸವೂ ಆಗಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ನಾರಾಯಣ ಸಾ ಭಾಂಡಗೆ ಮಾತನಾಡಿ, ದೇಶದ್ರೋಹಿಗಳ ವಿರುದ್ಧ ಪ್ರತಿಭಟನೆ ಮಾಡಿದರೆ ದೇಶಪ್ರೇಮಿಗಳ ಮೇಲೆ ಹಲವು ಪ್ರಕರಣ ದಾಖಲಿಸುತ್ತಾರೆ. ದೇಶದ್ರೋಹಿ ಘೋಷಣೆ ಕೂಗಿದವರಿಗೆ ಜಾಮೀನು ಸಿಗುವ ಕೇಸ್ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಂಗಣ್ಣ ಕುಪ್ಪಸ್ತ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಜಿಗಜಿನ್ನಿ, ವಿಎಚ್ಪಿ ಮುಖಂಡರಾದ ವಿಜಯ್ ಸುಲಾಖೆ, ರಾಜು ನಾಯಕ, ವೀರೇಶ ಬೆಣ್ಣೂರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.