ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಬಾಗಲಕೋಟೆ ಭೇಟಿ: ಈ ಮೂರು ಪ್ರಶ್ನೆಗಳಿಗೆ ಉತ್ತರಿಸಿ ಎಂದ ಕಾಂಗ್ರೆಸ್‌

Published 29 ಏಪ್ರಿಲ್ 2024, 7:23 IST
Last Updated 29 ಏಪ್ರಿಲ್ 2024, 7:23 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣೆ ಪ್ರಚಾರದ ಹಿನ್ನೆಲೆ ಸೋಮವಾರ ಬಾಗಲಕೋಟೆಗೆ ಆಗಮಿಸುತ್ತಿರುವ ಮೋದಿ ಅವರಿಗೆ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.

ಈ ಕುರಿತಂತೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌, ‘ಬಾಗಲಕೋಟೆಗೆ ಇಂದು ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರಿಗೆ ಈ ಪ್ರಶ್ನೆಗಳು..’ ಎಂದು ಪ್ರಶ್ನೆಗಳ ಪಟ್ಟಿಯೊಂದನ್ನು ಮುಂದಿಟ್ಟಿದ್ದಾರೆ.

‘ಬಾಗಲಕೋಟೆ - ಕುಡಚಿ ನಡುವಣ ರೈಲ್ವೇ ಮಾರ್ಗ ನೀಡಲು ಮೋದಿ ಸರ್ಕಾರ ವಿಫಲವಾಗಿದ್ದೇಕೆ?ಮಹಾದಾಯಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಮೋದಿ ಸರ್ಕಾರ ತಡೆ ಹಿಡಿದಿರುವುದೇಕೆ? ಕರ್ನಾಟಕದ ನರೇಗಾ ಕಾರ್ಮಿಕರಿಗೆ ಮೋದಿ ಸರ್ಕಾರ ವೇತನ ನೀಡುವುದು ಯಾವಾಗ?’ ಎಂಬ ಮೂರು ಪ್ರಶ್ನೆಗೆ ಉತ್ತರಿಸುವಂತೆ ಹೇಳಿದ್ದಾರೆ.

‘ಕರ್ನಾಟಕ ವಿರೋಧಿ ಧೋರಣೆಗೆ ಸಾಕ್ಷಿ’

‘ಕಳೆದ 8 ವರ್ಷಗಳಿಂದ ನೈಋತ್ಯ ರೈಲ್ವೆಯಲ್ಲಿ ಬಾಗಲಕೋಟೆ ಮತ್ತು ಕುಡಚಿ ನಡುವಣ ರೈಲ್ವೇ ಮಾರ್ಗ ವಿಳಂಬವಾಗಿದೆ. 142 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಕೇವಲ 46 ಕಿ.ಮೀ ಅಂದರೆ ಕೇವಲ 33% ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. 2010-11 ರಲ್ಲಿ ಈ ಯೋಜನೆಗೆ ₹986 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ ಈಗ ಇದರ ಒಟ್ಟಾರೆ ವೆಚ್ಚ ₹1649 ಕೋಟಿಗೆ ಏರಿದೆ. ಆರಂಭದಲ್ಲಿ 2016ಕ್ಕೆ ಈ ಯೋಜನೆ ಪೂರ್ಣಗೊಳ್ಳಬೇಕು ಎಂಬ ಗಡವು ನಿಗದಿ ಮಾಡಲಾಗಿತ್ತು. ಈಗ ಈ ಯೋಜನೆ 2027ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕರ್ನಾಟಕ ಸರ್ಕಾರ ಈ ಯೋಜನೆಗೆ ಉಚಿತವಾಗಿ ಭೂಮಿ ಹಾಗೂ ಯೋಜನೆಯ ವೆಚ್ಚದಲ್ಲಿ 50% ಅನುದಾನ ನೀಡುತ್ತಿದ್ದರು ಮೋದಿ ಸರ್ಕಾರ ಈ ಯೋಜನೆ ಜಾರಿ ಮಾಡಲು ವಿಫಲವಾಗಿದೆ. ಮಹತ್ವಾಕಾಂಕ್ಷಿ ರೈಲ್ವೆ ಯೋಜನೆ 11 ವರ್ಷಗಳ ವಿಳಂಬ ಎದುರಿಸುತ್ತಿರುವುದೇಕೆ? ಇದು ಮೋದಿ ಸರ್ಕಾರದ ಸಮರ್ಥತೆ ಹಾಗೂ ಕರ್ನಾಟಕ ವಿರೋಧಿ ಧೋರಣೆಗೆ ಸಾಕ್ಷಿ’ ಎಂದು ಹೇಳಿದರು.

‘ಕರ್ನಾಟಕದ ಜನತೆ ಮೇಲೆ ಪ್ರಧಾನಮಂತ್ರಿಗಳಿಗೆ ಯಾಕಿಷ್ಟು ದ್ವೇಷ?’

‘ಕಳೆದ ವರ್ಷದ ಕೇಂದ್ರ ಬಜೆಟ್‌ನಲ್ಲಿ ಮೋದಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ₹5300 ಕೋಟಿ ಅನುದಾನ ಘೋಷಣೆ ಮಾಡಿತು. ಒಂದು ವರ್ಷವಾದರೂ ಕೇಂದ್ರ ಸರ್ಕಾರ ಈ ಅನುದಾನದಲ್ಲಿ ನಯಾ ಪೈಸೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಮೋದಿ ಅವರು ಮಹಾದಾಯಿ - ಕಳಸಾ ಬಂಡೂರಿ ಯೋಜನೆ ವಿಘ್ನಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದರು. ಆದರೂ ಈ ವರ್ಷದ ಆರಂಭದಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಅನುಮತಿ ನೀಡಲು ನಿರಾಕರಿಸಿತು. ಬರ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಪೂರೈಕೆಗೆ ಈ ಯೋಜನೆ ಮಹತ್ವದ್ದಾಗಿದೆ. ಮೋದಿ ಸರ್ಕಾರ ಇಂತಹ ಮಹತ್ವದ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದೇಕೆ? ಕರ್ನಾಟಕದ ಜನತೆ ಮೇಲೆ ಪ್ರಧಾನಮಂತ್ರಿಗಳಿಗೆ ಯಾಕಿಷ್ಟು ದ್ವೇಷ?’ ಎಂದು ಕಿಡಿಕಾರಿದರು.

‘ನರೇಗಾ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡುವುದು ಯಾವಾಗ’

‘ಬರ ಪರಿಸ್ಥಿತಿಯಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಲ್ಲಿ ಕೂಲಿ ದಿನಗಳ ಪ್ರಮಾಣವನ್ನು 100ರಿಂದ 150ಕ್ಕೆ ಏರಿಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಬರ ಪೀಡಿತ ಪ್ರದೇಶಗಳಲ್ಲಿ ಕೂಲಿ ದಿನಗಳ ಸಂಖ್ಯೆ ಹೆಚ್ಚಳಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೂ ಮೋದಿ ಸರ್ಕಾರ ಈ ಯೋಜನೆ ವಿಸ್ತರಣೆ ಮಾಡಲು ವಿಫಲವಾಗಿದೆ. ಇದರ ಜೊತೆಗೆ ಮೋದಿ ಸರ್ಕಾರ ನರೇಗಾ ಕಾರ್ಮಿಕರಿಗೆ ನೀಡಬೇಕಾದ ಕೂಲಿಯ 1600 ಕೋಟಿ ಹಣವನ್ನು ಬಿಡುಗಡೆ ಮಾಡಿಲ್ಲ. ಮೋದಿ ಸರ್ಕಾರ ರಾಜ್ಯದ ನರೇಗಾ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡುವುದು ಯಾವಾಗ’ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT