ಬಾಗಲಕೋಟೆ: 'ಈ ಹಿಂದೆ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡುವಾಗ ಇಂದಿರಾಗಾಂಧಿ, ರಾಜೀವ್ ಗಾಂಧಿಗೆ ಏಕ ವಚನದಲ್ಲಿ ಬಯ್ಯುತ್ತಿದ್ದ ಸಿದ್ದರಾಮಯ್ಯ ಈಗ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಆಸೆಯಿಂದ ಸೋನಿಯಾ ಗಾಂಧಿ ಕಾಲಿಗೆ ಬೀಳುತ್ತಿದ್ದಾರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಲೇವಡಿ ಮಾಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿದ್ದರಾಮಯ್ಯ ಈ ಮೊದಲು ಕಾಂಗ್ರೆಸ್ ನಾಯಕರನ್ನು ನಿಂದಿಸಿರುವ ದಾಖಲೆಗಳು ನಮ್ಮ (ಬಿಜೆಪಿ) ಬಳಿ ಇವೆ' ಎಂದರು.
ಬಿಜೆಪಿಯ ಬಿ ಟೀಂ ಜೆಡಿಎಸ್ ಎಂಬ ಸಿದ್ದರಾಮಯ್ಯ ಆರೋಪಕ್ಕೆ, 'ಯಾರು ಸ್ವಾಮಿ ಕುಮಾರಸ್ವಾಮಿ ಅವರನ್ನ ಸಿಎಂ ಮಾಡಿದ್ದು, ಯಾರು ಸ್ವಾಮಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು' ಎಂದು ಮರು ಪ್ರಶ್ನಿಸಿದರು.
'ದೇವೆಗೌಡರ ಜೊತೆ ಹೊಂದಾಣಿಕೆ ಮಾಡಿಕೊಂಡು ಪ್ರಧಾನಿ ಮಾಡಿದ್ದು ನೀವೇ ತಾನೆ, ಕುಮಾರಸ್ವಾಮಿ ಅವರನ್ನ ಸಿಎಂ ಮಾಡಿದ್ದು, ಮೈಸೂರು ಮಹಾನಗರ ಪಾಲಿಕೆಯಲ್ಲಿ ಹೊಂದಾಣಿಕೆ ಮಾಡಿಕೊಂಡವರು ನೀವು ತಾನೇ?, ಹಾಗಾಗಿ ಕಾಂಗ್ರೆಸ್ನ ಬಿಟೀಂಜೆಡಿಎಸ್ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ನಲ್ಲಿ ಇರೋರೆಲ್ಲ ಈ ಮೊದಲು ಜೆಡಿಎಸ್ನಲ್ಲಿ ಇದ್ದೋರೆ. ಈಗ ಆಚೆ ಈಚೆ ಮಾಡ್ತಿರ್ತಾರೆ. ಸಿದ್ರಾಮಣ್ಣ ಕೂಡ ಜೆಡಿಎಸ್ನಿಂದ ಬಂದವರು. ಇವತ್ತು ಜೆಡಿಎಸ್ ಬಯ್ಯುತ್ತಾರೆ. ಅವ್ರ ಹಣೆಬರಹ ಅದು, ಯಾವುದರಲ್ಲಿ ಲೀಡರ್ ಆಗ್ತಾರೆ ಅದನ್ನ ತುಳಿತಾರೆ. ಅದನ್ನ ಬಿಡಿ. ಸಿದ್ದರಾಮಯ್ಯ ಬಹಳ ದೊಡ್ಡದೊಡ್ಡದು ಮಾತಾಡ್ತಾರಲ್ಲ, ಒಂದು ಸಾರಿ ಅವ್ರ ಇತಿಹಾಸ ನೋಡಿಕೊಳ್ಳಲಿ ಎಂದು ಟೀಕಿಸಿದರು.