ಬಾಗಲಕೋಟೆ:ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿರುವ ದಿನವೇ ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾದರು.
ಬಾಗಲಕೋಟೆಗೆ ಬಂದಿರುವ ಮೋದಿ ಪಿ.ಸಿ.ಗದ್ದಿಗೌಡರ, ವಿಜಯಪುರದ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಪ್ರಚಾರ ನಡೆಸಿದರು.
ಬಿಲ್ಲು ಬಾಣ ನೀಡಿ ಮೋದಿ ಅವರಿಗೆ ಗೌರವಿಸಲಾಯಿತು. ಮೋದಿ ಇಲ್ಲಿಯೂ ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದರು.
‘ಬಿಜಾಪುರ ಮತ್ತು ಬಾಗಲಕೋಟೆಯ ಬಂಧು ಭಗಿನಿಯರೇ...ನಿಮ್ಮ ಚೌಕಿದಾರ್ನ ನಮನಗಳು..’ ಇದು ಮಠ–ಮಂದಿರಗಳ ನಾಡು, ಬಸವಣ್ಣನನ್ನು ದೇಶಕ್ಕೆ ನೀಡಿದ ಭೂಮಿ. ಬಸವಣ್ಣ ದೇಶಕ್ಕೆ ಅನುಭವ ಮಂಟಪವನ್ನು ನೀಡಿದರು.
LIVE: PM @narendramodi addressing a public meeting at Bagalkot, Karnataka. https://t.co/N4A0wXxwy8 #EveryVoteForModi
— BJP (@BJP4India) April 18, 2019
‘ದೇಶದಲ್ಲಿ ಪ್ರಮುಖ ಆರೋಗ್ಯ ಕಾರ್ಯಕ್ರಮ ಆಯುಷ್ಮಾನ್ ಮೂಲಕ ಸಿಗುತ್ತಿದೆ. ವರ್ಷಕ್ಕೆ ₹5 ಲಕ್ಷದವರೆಗೂ ಆರೋಗ್ಯ ಸಂಬಂಧಿತ ಸೇವೆಗಳಿಗೆ ಬಳಸಬಹುದಾಗಿದೆ. ಭಾರತ ಉಗ್ರರ ಶಿಬಿರಗಳತ್ತ ನುಗ್ಗಿ ದಾಳಿ ನಡೆಸಿದೆ’ ಎಂದು ಬಿಜೆಪಿಸರ್ಕಾರದ ಸಾಧನೆಗಳನ್ನು ಮುಂದಿಟ್ಟರು.
‘ಆಗಾಗ್ಗೆ ಒಂದಲ್ಲಾ ಒಂದು ಸಭೆ ಸಮಾರಂಭಗಳಲ್ಲಿ, ಮಾಧ್ಯಮಗೋಷ್ಠಿಗಳಲ್ಲಿ ಭಾವನಾತ್ಮಕ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಪದೇ ಪದೇ ಭಾವನೆಯ ಕಟ್ಟೆಯೊಡೆಯುತ್ತಿದೆ, ಮುಖ್ಯಮಂತ್ರಿ ಕಣ್ಣೀರು ಹಾಕುತ್ತಿದ್ದಾರೆ. ಇಂಥ ಸರ್ಕಾರವನ್ನು ನೀವು ನಿರೀಕ್ಷಿಸಿದ್ದರೇ?
ಭಾವನಾತ್ಮಕ ನಾಟಕ ನಡೆಯುತ್ತಲೇ ಇದೆ. ದ್ವೇಷಪೂರಿತ, ಭಾವನಾತ್ಮಕನಾಟಕೀಯ ಸರ್ಕಾರ ನಡೆಯುತ್ತಿದೆ ಇಲ್ಲಿ. ದೆಹಲಿಯಲ್ಲಿ ಎಂಥ ಸರ್ಕಾರ ನಡೆಯುತ್ತಿದೆ ಎಂಬುದು ನಿಮಗೆ ತಿಳಿದಿದೆ. ಎಷ್ಟು ಸಾಧ್ಯವೊ ಅಷ್ಟು ದೋಚಿಕೊಳ್ಳಲು ಹವಣಿಸುತ್ತಿದ್ದಾರೆ’ ಎಂದು ರಾಜ್ಯದ ಮೈತ್ರಿ ಸರ್ಕಾರವನ್ನು ಟೀಕಿಸಿದರು.
‘ಮೋದಿ ಹೊಡೆಯುತ್ತಾನೆ, ಮೋದಿ ಹೊಡೆಯುತ್ತಾನೆ...ಕಾಪಾಡಿ ಕಾಪಾಡಿ....’ ಎಂದು ಪಾಕಿಸ್ತಾನ,ಉಗ್ರರು ಪರಿತಪಿಸುತ್ತಿದ್ದಾರೆ.
ಕರ್ನಾಟಕ, ಜೆಡಿಎಸ್ ಎಲ್ಲ ಮೈತ್ರಿಗಳೂ ಅಷ್ಟೇ ದೇಶಕ್ಕಾಗಿ ಅಲ್ಲ ತಮ್ಮ ಉದ್ದಾರಕ್ಕಾಗಿ ನಡೆಯುತ್ತಿವೆ. ’ಪಾಕಿಸ್ತಾನ ಉಗ್ರ ಶಿಬಿರಗಳ ನೆಲದಲ್ಲಿ ಭಾರತದ ವಾಯುಪಡೆ ನಡೆಸಿದ ಕಾರ್ಯಾಚರಣೆಯನ್ನು ಪದೇ ಪದೇ ಹೇಳಬೇಡಿ ಎಂದು ಇಲ್ಲಿನ ಮುಖ್ಯಮಂತ್ರಿ ಹೇಳುತ್ತಾರೆ. ಅದರಿಂದ ಮತಬ್ಯಾಂಕ್ಗೆ ಹೊಡೆತ ಬೀಳುತ್ತದೆ ಎನ್ನುತ್ತಾರೆ. ಹಾಗಾದರೆ, ಕಾಂಗ್ರೆಸ್– ಜೆಡಿಎಸ್ ಮತಬ್ಯಾಂಕ್ ಬಾಗಲಕೋಟೆಯಲ್ಲಿದೆಯೋ ಅಥವಾ ಬಾಲಾಕೋಟ್ನಲ್ಲೋ? ಎಂದು ಪ್ರಶ್ನಿಸಿದರು.
‘ಲಿಂಗಾಯತ ಸಮುದಾಯವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ನ ಸಚಿವರೊಬ್ಬರು ಹೋರಾಡಿದರು. ತಾಯಿ ಎದೆ ಹಾಲನ್ನು ಬೇರೆ ಬೇರೆ ಮಾಡಲು ಸಾಧ್ಯವೇ? ಇಂಥ ಪ್ರಯತ್ನದಲ್ಲಿ ಕಾಂಗ್ರೆಸ್ ತೊಡಗಿದೆ. ಇವತ್ತಿಗೂ ಅವರು ಗುದ್ದಾಟದಲ್ಲಿದ್ದಾರೆ. ಕಾಂಗ್ರೆಸ್ ಮತಬ್ಯಾಂಕ್ಗಾಗಿ ಏನು ಬೇಕಾದರೂ ಮಾಡುವ ಸ್ಥಿತಿ ತಲುಪಿದೆ.. ಇದರ ಬಗ್ಗೆ ಎಚ್ಚರಿಕೆ ಇರಲಿ’ ಎಂದು ಮೋದಿ ಹೇಳಿದರು.
ಭಯೋತ್ಪಾದನೆಯ ದಮನ, ರೈತರ ಆದಾಯದುಪ್ಪಟ್ಟುಗೊಳಿಸುವುದು, ಬಡವರಿಗೆ ಮನೆ ನಮ್ಮ ಸಂಕಲ್ಪ ಎಂದರು.ರೈತರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಪೂರ್ಣ ಲಾಭ ದೊರೆಯದಂತೆ ಮೈತ್ರಿ ಸರ್ಕಾರ ತಡೆಯುತ್ತಿದೆ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.