ಬಾಗಲಕೋಟೆ: ಜಿಲ್ಲೆಯಲ್ಲಿ ಬಂಜಾರ ಸಮುದಾಯದ ಸರ್ಕಾರಿ ನೌಕರರು ಕೆಲಸ ಮಾಡುವುದು ಕಷ್ಟವಾಗಿದೆ. ಅವರನ್ನು ಗುರಿಯಾಗಿಸಿ ತೊಂದರೆ ಕೊಡಲಾಗುತ್ತಿದೆ ಎಂದು ಸಮಾಜದ ಮುಖಂಡ ಬಲರಾಮ ನಾಯಕ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ ಸಮಾಜದ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ ಅವರನ್ನು ಸುಖಾಸುಮ್ಮನೆ ವರ್ಗಾವಣೆ ಮಾಡುವ, ಅಮಾನತುಗೊಳಿಸುವ ಕೆಲಸ ನಡೆಯುತ್ತಿದೆ. ಇಲ್ಲಸಲ್ಲದ ಕಿರುಕುಳ ನೀಡುವುದು ಜಿಲ್ಲೆಯ ಜನಪ್ರತಿನಿಧಿಗಳ ಕೆಲಸವಾಗಿದೆ ಎಂದರು.
ಇನ್ನು ಮುಂದೆ ಯಾರಿಗೆ ತೊಂದರೆಯಾದರೂ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮುಖಂಡ ಚಂದ್ರಶೇಖರ ರಾಥೋಡ ಮಾತನಾಡಿ, ಬಂಜಾರ ಸಮಾಜವನ್ನು ಎಲ್ಲಾ ಪಕ್ಷದವರು ಕಡೆಗಣಿಸುತ್ತಿದ್ದಾರೆ ಎಂದರು.
ವಕೀಲ ರಾಜು ಲಮಾಣಿ ಮಾತನಾಡಿ, ಜಿಲ್ಲಾ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ನವನಗರದಲ್ಲಿ ಜಮೀನು ಕೊಟ್ಟಿಲ್ಲ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಹೂವಪ್ಪ ರಾಥೋಡ ಹಾಜರಿದ್ದರು.