ಅಮೀನಗಡ: ಸಮಾಜ ಸೇವೆಯ ದೃಷ್ಟಿಕೋನದಿಂದ ಕಟ್ಟಿದ ಸಂಸ್ಥೆಯ ಮೇಲೆ ಜನತೆ ವಿಶ್ವಾಸ ಇಡುತ್ತಾರೆ. ಅಂತಹ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದುತ್ತದೆ ಎಂದು ಪಟ್ಟಣದ ಶ್ರೀಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರ ರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ಶಿವಶಂಕರಿ ಪತ್ತಿನ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಂಸ್ಥೆಯನ್ನು ಕಟ್ಟಿದವರು ತಮ್ಮ ವೈಯಕ್ತಿಕ ಆರ್ಥಿಕ ಪ್ರಗತಿಗೆ ಒತ್ತು ನೀಡದೆ ಬಡವರು, ಕೂಲಿಕಾರ್ಮಿಕರು, ಮಹಿಳೆಯರು, ಸಣ್ಣಪುಟ್ಟ ವ್ಯಾಪಾರಸ್ಥರ ಆರ್ಥಿಕ ಪ್ರಗತಿಗೆ ಹಣಕಾಸು ಸಂಸ್ಥೆಗಳು ಹೆಚ್ಚು ಒತ್ತು ನೀಡಬೇಕು. ಗ್ರಾಹಕರ, ಠೇವಣಿದಾರರ ವಿಶ್ವಾಸಗಳಿಸಬೇಕು ಎಂದರು.
ನಿರ್ದೇಶಕರಿಗೆ ಗುರುತರ ಜವಾಬ್ದಾರಿ ಇದೆ. ನಿಸ್ಪೃಹ ಸೇವೆ, ಗ್ರಾಹಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿದರೆ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಕಂಪ್ಯೂಟರ್ ಉದ್ಘಾಟನೆಯನ್ನು ಚಿಕ್ಕಮಾಣಿಕೇಶ್ವರಿ ಅಮ್ಮನವರು ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಶಿವಾನಂದ ಎತ್ತಿನಮನಿ ಪ್ರಾಸ್ತಾವಿಕ ಮಾತನಾಡಿದರು.
ಪಿಕೆಪಿಎಸ್ ಮಾಜಿ ಅಧ್ಯಕ್ಷ ಅಮರೇಶ ಮಡ್ಡಿಕಟ್ಟಿ, ಕಸಾಪ ವಲಯ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಸೋಮಶೇಖರ ನಾಲತ್ತವಾಡ, ನಿರ್ದೇಶಕರಾದ ಶಿವಕುಮಾರ ಕಾಳಗಿ, ಬಸವರಾಜ ಮುದ್ದೇಬಿಹಾಳ, ಮಹಾಂತೇಶ ಕುಂಬಾರ, ಶ್ರೀನಾಥ ಹಣಗಿ, ಗಣಪತಿ ಸಣಕಲ್ಲಗೌಡರ, ಶಿವಕುಮಾರ ರಾಮಥಾಳ ಇದ್ದರು.