ಗುಳೇದಗುಡ್ಡ: ತಾಲ್ಲೂಕಿನ ಕೋಟೆಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರುಡಿ ಗ್ರಾಮದ ಗುಡ್ಡ ಪ್ರದೇಶದ ಖಾಸಗಿ ಜಮೀನಿನಲ್ಲಿ ನಡೆದಿರುವ ಕಲ್ಲು ಗಣಿಗಾರಿಕೆಯ ಭಾಗವಾದ ಸಿಲ್ಕಾ ಸ್ಯಾಂಡ್ ಫ್ಯಾಕ್ಟರಿ ಧೂಳು ಫ್ಯಾಕ್ಟರಿ ಸಮೀಪದ ಗ್ರಾಮಗಳಾದ ಮುರುಡಿ, ಖಾನಾಪೂರ ಮುಂತಾದ ಗ್ರಾಮಗಳಲ್ಲಿ ಧೂಳು ಆವರಿಸುವುದರಿಂದ ಗ್ರಾಮಸ್ಥರಿಗೆ ಆತಂಕ ಎದುರಾಗಿದೆ.
ಇದು ಗುಡ್ಡದ ಮೇಲೇ 2019 ರಲ್ಲಿ ಸ್ಥಾಪನೆ ಆಗಿರುವುದರಿಂದ ಮತ್ತು ಎತ್ತರವಾದ ಸ್ಥಳ ಸ್ಥಾಪಿಸಿರುವುದರಿಂದ ಗಾಳಿಯ ಜೊತೆ ಧೂಳು ಹರಡುತ್ತಿದೆ. ಇಲ್ಲಿ ಕಲ್ಲನ್ನು ಗುಡ್ಡದಿಂದ ಹೊರತೆಗೆದು ಅದನ್ನು ಮಶಿನ್ ಮೂಲಕ ಚಿಕ್ಕ ರೀತಿಯಲ್ಲಿ ಪುಡಿ ಮಾಡುವುದರಿಂದ ಧೂಳು ಹರಡುತ್ತಿದೆ. ಇಲ್ಲಿ ತಯಾರಿಸುವ ಕಲ್ಲಿನ ಪುಡಿಯನ್ನು ಧಾರವಾಡ, ಸಾಂಗ್ಲಿ, ಬೆಳಗಾವಿ, ಚಿಕ್ಕೋಡಿ, ಕೊಲ್ಲಾಪೂರ, ಸೊಲ್ಲಾಪುರ ಮುಂತಾದ ನಗರಗಳಿಗೆ ಗ್ಲಾಸ್ ಪ್ಯಾಕ್ಟರಿಗಳಿಗೆ ಮತ್ತು ಅಚ್ಚು ತಯಾರಿಕಾ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಮುಂಜಾಗ್ರತಾ ಕ್ರಮ ವಹಿಸದೆ ಇರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಮುರುಡಿ ಮತ್ತು ಖಾನಾಪೂರ ಹಾಗೂ ಸುತ್ತಮುತ್ತಲ ಗ್ರಾಮದವರು ಇತ್ತೀಚಿಗೆ ಗುಳೇದಗುಡ್ಡ ತಾಲ್ಲೂಕು ತಹಶೀಲ್ದಾರ್ ಮಂಗಳಾ ಎಂ.ಅವರಿಗೆ ಮನವಿ ನೀಡಿ ಎಂ.ಸ್ಯಾಂಡ್ ಕ್ರಶರ್ ಖಾಸಗಿಯಾಗಿ ನಡೆಸಲಾಗುತ್ತಿದೆ.
ಹಾರುವ ಧೂಳಿನ ಕಣಗಳಿಂದ ಅಕ್ಕ ಪಕ್ಕದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಲ್ಲದೇ ಕುಡಿಯುವ ನೀರು ಮಲೀನವಾಗುತ್ತಿದೆ. ಬೆಳೆದ ಬೆಳೆ ಹಾಳಾಗುತ್ತಿದೆ ಎಂದು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಳಾದ ಮುರುಡಿಯ ಭೀಮಪ್ಪ ಡೆಂಗಿ, ಖಾನಾಪುರ ಗ್ರಾಮದ ನಾಗೇಶಿ ಗೌಡ್ರ, ಯಮನಪ್ಪ ಗೌಡ್ರ ಮುಂತಾದವರು ದೂರು ನೀಡಿದ್ದಾರೆ.
ಯಂತ್ರದ ಮೂಲಕ ಕಲ್ಲು ತೆಗೆಯುವಾಗ ಮತ್ತು ಆ ಕಲ್ಲನ್ನು ಪುಡಿ ಮಾಡುವಾಗ ಅದರಿಂದ ಹಾರುವ ಧೂಳು ಗಾಳಿಯ ಮೂಲಕ ಹರಡುತ್ತದೆ. ಅದಕ್ಕೆ ಮಾಲೀಕರು ಮುಂಜಾಗ್ರತಾ ಕ್ರಮ ವಹಿಸಿಲ್ಲ. ಕೂಡಲೇ ಅದನ್ನು ಬಂದ್ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಜೀವ ಸಂಕುಲಕ್ಕೆ ಮತ್ತು ಪರಿಸರಕ್ಕೆ ಪ್ಯಾಕ್ಟರಿ ಧೂಳಿನಿಂದ ಅಪಾಯವಾಗುತ್ತಿದೆ. ಕೂಡಲೇ ಈ ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು.ಪಿಂಟು ರಾಠೋಡ, ಹುಲ್ಲಿಕೇರಿ ಗ್ರಾಮ
ಫ್ಯಾಕ್ಟರಿ ಮಾಲೀಕರು ಡಿ.30 ರವರೆಗೆ ಹಳ್ಳಿಗಳಿಗೆ ಧೂಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮುಂಜಾಗ್ರತೆ ವಹಿಸದಿದ್ದರೆ ನಂತರ ಕಾನೂನು ಕ್ರಮ ಜರುಗಿಸಲಾಗುವುದುಮಂಗಳಾ ಎಂ., ತಹಶೀಲ್ದಾರರು ಗುಳೇದಗುಡ್ಡ
ಧೂಳು ಹರಡದಂತೆ ಶೀಟ್ಗಳನ್ನು ಹಾಕಲಾಗಿದೆ. ಮೂರು ದಿನಗಳಲ್ಲಿ ನೀರು ಸಂಪರಣೆ ಅಳವಡಿಸಲಾಗುವುದು. ಇಗಿರುವ ಧೂಳು ಎರಡು ನೂರು ಮೀಟರ ಹೋಗುವುದಿಲ್ಲಾ ಗ್ರಾಮಗಳು ಸ್ವಲ್ಪು ದೂರ ಇವೆ.ಮುರುಗೇಶ ಕಡ್ಲಿಮಟ್ಟಿ ಮಾಲೀಕ ಸಿಲ್ಕಾ ಸ್ಯಾಂಡ್ ಫ್ಯಾಕ್ಟರಿ
ನಾವು ಫ್ಯಾಕ್ಟರಿ ಇದ್ದ ಸ್ಥಳಕ್ಕೆ ಇತ್ತಿಚಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸದ್ಯದಲ್ಲಿ ಗುಳೇದಗುಡ್ಡ ತಹಲ್ದಾರರಿಗೆ ವರದಿ ನೀಡುತ್ತೇವೆರಾಜಶೇಖರ ಪುರಾಣಿಕ, ಪರಿವೀಕ್ಷಣಾ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿಣ್ಯ ನಿಯಂತ್ರಣ ಮಂಡಳಿ ಬಾಗಲಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.