ಹುನಗುಂದ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ಶೌಚಾಲಯದ ಗುಂಡಿ ತುಂಬಿದ್ದು, ತ್ಯಾಜ್ಯ ಮಿಶ್ರಿತ ನೀರು ರಸ್ತೆ ಪಕ್ಕದ ತಗ್ಗು, ಗುಂಡಿಗಳಲ್ಲಿ ಸಂಗ್ರಹವಾಗಿದೆ. ಇದರಿಂದ ಸುತ್ತಲೂ ದುರ್ನಾತ ಹರಡಿದ್ದು, ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದೆ.
ತ್ಯಾಜ್ಯ ನೀರು ಸಂಗ್ರಹವಾಗಿ ದುರ್ನಾತ ಬೀರುವ ಬಗ್ಗೆ ಒಂದು ವರ್ಷದಿಂದ ನಿಲಯಪಾಲಕ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
‘ವಸತಿ ನಿಲಯ ಸಮೀಪದ ಆದರ್ಶ ವಿದ್ಯಾಲಯದ ನೀರಿನ ಪೈಪ್ಲೈನ್ ಇಲ್ಲೇ ಹಾದುಹೋಗಿದ್ದು, ರಸ್ತೆ ಪಕ್ಕದಲ್ಲಿರುವ ಶೌಚಾಲಯದ ಗುಂಡಿ ನೀರಿನಲ್ಲಿ ಹುದುಗಿಹೋಗಿದೆ. ಎಮ್ಮೆಗಳು ಹಾಗೂ ಬಿಡಾಡಿಗಳು ದನಗಳು ಇಲ್ಲೇ ಮಲಗುತ್ತವೆ. ಒಂದು ವೇಳೆ ಪೈಪ್ಲೈನ್ ಒಡೆದು, ಮಲಿನ ನೀರು ಮಿಶ್ರಣವಾದ ನೀರನ್ನು ವಿದ್ಯಾರ್ಥಿಗಳು ಸೇವಿಸಿದರೆ ಯಾರು ಹೊಣೆ’ ಎಂದು ಸ್ಥಳೀಯ ನಿವಾಸಿ ಸುಭಾಷ ಮುಕ್ಕಣ್ಣನವರ ಪ್ರಶ್ನಿಸಿದರು.
‘ತಗ್ಗು, ಗುಂಡಿಗಳಲ್ಲಿ ಗಲೀಜು ನೀರು ಸಂಗ್ರಹದಿಂದ ಸೊಳ್ಳೆ, ಕ್ರೀಮಿ–ಕೀಟಗಳೂ ಹೆಚ್ಚಿವೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ತ್ಯಾಜ್ಯ ನೀರು ಸಂಗ್ರಹ ಹಾಗೂ ಕ್ರೀಮಿ–ಕೀಟ ನಿಯಂತ್ರಿಸಲು ಪುರಸಭೆ ಅಧಿಕಾರಿಗಳು ಕ್ರಮ ವಹಿಸಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಸಿದ್ದಪ್ಪ ಹೆರೂರು ಆಗ್ರಹಿಸಿದರು
‘ಶೌಚಾಲಯದ ನೀರು ಸಂಗ್ರಹವಾಗಿರುವ ಜಾಗಕ್ಕೆ ಎರಡು ದಿನಗಳ ಹಿಂದೆ ಅಧಿಕಾರಿಯೊಂದಿಗೆ ನಿರ್ಮಿತಿ ಕೇಂದ್ರದ ಎಂಜಿನಿಯರ್ ಸಹ ಭೇಟಿ ನೀಡಿದ್ದರು. ಒಂದು ವಾರದಲ್ಲಿ ಕಾಮಗಾರಿ ಕೈಗೊಂಡು ಸಂಗ್ರಹವಾಗಿರುವ ನೀರನ್ನು ಪೈಪ್ಲೈನ್ ಮೂಲಕ ಒಳಚರಂಡಿಗೆ ಸಂಪರ್ಕ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಮೆಟ್ರಿಕ್ ನಂತರದ ವಸತಿ ನಿಲಯದ ನಿಲಯ ಪಾಲಕ ವಿದ್ಯಾಧರ ಹೇಳಿದರು.
ಹುನಗುಂದ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಸತಿ ನಿಲಯದ ಶೌಚಾಲಯದ ಗುಂಡಿ ತುಂಬಿ ರಸ್ತೆ ಪಕ್ಕದ ತಗ್ಗು ಗುಂಡಿಗಳಲ್ಲಿ ಸಂಗ್ರಹವಾಗಿರುವ ನೀರು ಹಸಿರು ಬಣ್ಣದಿಂದ ಕೂಡಿರುವುದು
ಹುನಗುಂದ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಸತಿ ನಿಲಯದ ಶೌಚಾಲಯದ ಗುಂಡಿ ತುಂಬಿ ರಸ್ತೆ ಪಕ್ಕದ ತಗ್ಗು ಗುಂಡಿಗಳಲ್ಲಿ ಸಂಗ್ರಹವಾಗಿರುವ ನೀರು ಹಸಿರು ಬಣ್ಣದಿಂದ ಕೂಡಿರುವುದು