ಬಾಗಲಕೋಟೆ: ನವನಗರದ ಸೆಕ್ಟರ್ ನಂ.33ರಲ್ಲಿ ನಿರ್ಮಾಣವಾಗಿರುವ ನಗರಸಭೆ ಗ್ರಂಥಾಲಯ ಸಾರ್ವಜನಿಕರ ಉಪಯೋಗಕ್ಕೆ ಬಾರದೇ ನಿರುಪಯುಕ್ತವಾಗಿದೆ.
2008–09ನೇ ಸಾಲಿನಲ್ಲಿ ರಾಜ್ಯ ಹಣಕಾಸು ಆಯೋಗದ ಪ್ರೋತ್ಸಾಹ ಧನದ ವಿಶೇಷ ಯೋಜನೆಯಡಿ (ಎಸ್ ಎಫ್ಸಿ) ₹ 5.95 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡ 8 ವರ್ಷ ವಾದರೂ ಸಾರ್ವಜನಿಕರ ಬಳಕೆಗೆ ಬಾರ ದಿರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ. ಜ್ಞಾನ ಸಂಪಾದನೆಗೆ ಗ್ರಂಥಾಲಯಗಳ ಪಾತ್ರ ಮಹತ್ತರವಾಗಿದೆ.
ಲಕ್ಷಾಂತರ ರೂಪಾಯಿ ವ್ಯಯಮಾಡಿ ನಿರ್ಮಿಸಿರುವ ಕಟ್ಟಡವೀಗ ಪಾಳು ಬಿದ್ದಿರುವುದು ಬೇಸರ ಮೂಡಿಸಿದೆ ಎಂದು ಓದುಗ ಸಂಗಮೇಶ ಭಜಂತ್ರಿ ದೂರಿದರು. ಸಂಬಂಧಿಸಿದವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪಾಳು ಬಿದ್ದಿರುವ ಕಟ್ಟಡ ದುರಸ್ತಿಗೊಳಿಸಿ ಸೌಲಭ್ಯ ಕಲ್ಪಿಸಬೇಕು. ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿರುವ ಗ್ರಂಥಾಲಯವನ್ನು ಕೂಡಲೇ ಆರಂಭಿಸಬೇಕು’ ಎಂದು ಆಟೊ ಚಾಲಕ ಕಾಳಿಂಗಪ್ಪ ಶಿಕ್ಕೇರಿ ಒತ್ತಾಯಿಸಿದರು.
‘ಕಟ್ಟಡದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಟ್ಟಡದ ತುಂಬಾ ಕಸ ಹಾಗೂ ದೂಳು ತುಂಬಿಕೊಂಡಿದೆ. ಕಿಟಕಿ ಗಾಜುಗಳು ಹಾಳಾಗಿವೆ. ಹಂದಿ, ನಾಯಿಗಳ ಆವಾಸ ಸ್ಥಾನವಾಗಿ ಕಟ್ಟಡ ಬದಲಾಗಿದೆ’ ಎಂದು ಸ್ಥಳೀಯರು ಆರೋಪಿಸಿದರು.
‘ರಾತ್ರಿಯಾದರೆ ಸಾಕು, ಗ್ರಂಥಾಲಯದ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತದೆ. ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು ಆವರಣದ ತುಂಬಾ ಬಿದ್ದಿರುತ್ತವೆ. ಕಟ್ಟಡ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ’ ಎಂದು ನಿವಾಸಿಗಳು ಆರೋಪಿಸುತ್ತಾರೆ.
‘ಮನೆಯ ಹತ್ತಿರವೇ ಇರುವ ಗ್ರಂಥಾಲಯವನ್ನು ಪುನಾರಂಭ ಮಾಡುವುದರಿಂದ ತುಂಬಾ ಸಹಾಯವಾಗಲಿದೆ. ಶಾಲೆಯಿಂದ ಬಂದ ನಂತರ ಪತ್ರಿಕೆ ಓದಲು ಅನುಕೂಲವಾಗಲಿದೆ’ ಎಂದು ವಿದ್ಯಾರ್ಥಿ ಲೋಹಿತ್ ಭಜಂತ್ರಿ ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.
* *
ಗ್ರಂಥಾಲಯ ನಿರುಪಯುಕ್ತವಾಗಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಪೌರಾಯುಕ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ದ್ಯಾವಪ್ಪ ರಾಕುಂಪಿ
ನಗರಸಭೆ ಅಧ್ಯಕ್ಷ