ಮಹಾಲಿಂಗಪುರ: ‘ನಗರ ಪ್ರದೇಶದ ಜನತೆಯ ಅತಿಯಾದ ಸ್ವಾರ್ಥ ಹಾಗೂ ಲಾಲಸೆಗಳಿಂದ ಪರಿಸರ ನಾಶವಾಗುತ್ತಿದೆ. ತನ್ನ ಮನೆಯ ಸೌಂದರ್ಯಕ್ಕಾಗಿ ಮನುಷ್ಯನು ಉಪಯೋಗಿಸುತ್ತಿರುವ ಐಷಾರಾಮಿ ವಸ್ತುಗಳಿಗಾಗಿ ಮಾಡುತ್ತಿರುವ ಮರ ಗಿಡಗಳ ಬಳಕೆಯಿಂದ ಪರಿಸರದ ಸಮತೋಲನ ತಪ್ಪಿದೆ. ಮಾನವನ ಆರೋಗ್ಯ ಕಾಪಾಡಲು ಮರಗಳ ಪೋಷಣೆ ಅನಿವಾರ್ಯ. ಅದರಿಂದ ಸಮಾಜದ ಆರೋಗ್ಯವೂ ವೃದ್ಧಿಸುತ್ತದೆ’ ಎಂದು ಗ್ರೀನ್ ಬೇಸಿನ್ ಲಯನ್ಸ್ ಸಂಸ್ಥೆ ಅಧ್ಯಕ್ಷ ಸಂಜು ಅಂಬಿ ಹೇಳಿದರು.
ಸ್ಥಳೀಯ ವೈಷ್ಣವಿದೇವಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಮರಗಿಡಗಳ ನಾಶದಿಂದ ಸರಿಯಾಗಿ ಮಳೆಯಾಗುತ್ತಿಲ್ಲ, ನಮ್ಮ ಭಾಗದಲ್ಲಿ 4 ವರ್ಷಗಳಿಂದ ಬರಗಾಲ ತಾಂಡವವಾಡುತ್ತಿದ್ದು ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಗುಳೇ ಹೋಗುತ್ತಿದ್ದಾರೆ. ಹಸಿರು ಕೇವಲ ಪರಿಸರವಲ್ಲ ಅದು ನಮ್ಮ ಬದುಕಿನ ಹಾದಿಯಾಗಬೇಕು. ಸಸಿ ನೆಡಲು ಸ್ಥಳ ಇರುವ ಯಾವ ಜಾಗೆಯನ್ನೂ ಬಿಡದೇ ಕ್ರಾಂತಿಯ ರೂಪದಲ್ಲಿ ಸಸಿ ನೆಡುವ ಕೆಲಸವಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕಿ ರೂಪಾಲಿ ಅಂಗಡಿ, ಲಯನ್ಸ್ ಮಾಜಿ ಅಧ್ಯಕ್ಷ ಡಾ.ಅಶೋಕ ದಿನ್ನಿಮನಿ ಮಾತನಾಡಿದರು. ವಿನೋದ ಬಿರಾದಾರ, ವಿಷ್ಣುಗೌಡ ಪಾಟೀಲ, ಶ್ರೀಶೈಲ ಕಾರಜೋಳ, ರವಿ ಖೋತ, ಶಂಕರಗೌಡ ಪಾಟೀಲ, ಶಿವಾನಂದ ಕೋಳಿಗುಡ್ಡ, ರಾಜು ತೇಲಿ ಹಾಗೂ ಪ್ರಶಾಂತ ಕೋಳಿಗುಡ್ಡ ಕಾರ್ಯಕ್ರಮದ ಆಯೋಜನೆ ಮಾಡಿದ್ದರು.