ಬನಹಟ್ಟಿ: ಬರುವ ಡಿ. 28ರಿಂದ 30ರವರೆಗೆ ತೇರದಾಳದ ಭಾಗ್ಯೋದಯ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಬಾಗಲಕೋಟೆ ಜಿಲ್ಲಾ ವಾಲಿಬಾಲ್ ಸಂಸ್ಥೆ ಮತ್ತು ಭಾಗ್ಯೋದಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಯುವಕ ಮತ್ತು ಯುವತಿಯರ ಹೊನಲು ಬೆಳಕಿನ ವಾಲಿಬಾಲ್ ಚಾಂಪಿ ಯನ್ಶಿಪ್ ಪಂದ್ಯಾವಳಿ ನಡೆಯಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ ತಿಳಿಸಿದರು.
ಅವರು ಇತ್ತೀಚಿಗೆ ತಮ್ಮ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು.
ಪಟ್ಟಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಪಂದ್ಯಾವಳಿಯಲ್ಲಿ 25 ಯುವಕರ ಮತ್ತು 20 ಯುವತಿಯರ ತಂಡಗಳು ಭಾಗವಹಿಸಲಿವೆ.
ಇದೇ ಸಂದರ್ಭದಲ್ಲಿ ಜನವರಿಯಲ್ಲಿ ನಡೆಯುವ ರಾಷ್ಟ್ರೀಯ ಯುವ ಪುರಷ ಮತ್ತು ಮಹಿಳಾ ತಂಡದ ಆಯ್ಕೆಯನ್ನು ಮಾಡಲಾಗುವುದು. ಈ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ವಾಲಿಬಾಲ್ ಆಟಗಾರರು, ಕ್ರೀಡಾಧಿಕಾರಿಗಳು, ತಾಂತ್ರಿಕ ಸಮಿತಿಯ ಸದಸ್ಯರು, ರಾಜ್ಯ ಆಯ್ಕೆ ಸಮಿತಿ ಮತ್ತು ರಾಜ್ಯ ವಾಲಿಬಾಲ್ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಪಂದ್ಯಾವಳಿ ಯನ್ನು ವೀಕ್ಷಿಸಲು ಬರುವ ಮಹಿಳೆಯ ರಿಗೆ ವಿಶೇಷ ಆಸನದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ತೇರದಾಳ ಭಾಗ್ಯೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ಪತ್ತಾರ, ಪುರಸಭೆಯ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾವಸಾಬ ಗುಬಚಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.