ಬಳ್ಳಾರಿ: ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ಪೊಲೀಸರು ನಾಗರಿಕರಿಗಾಗಿ ಬಿಡುಗಡೆ ಮಾಡಿದ್ದ ಮೊಬೈಲ್ ಆ್ಯಪ್ ಅನ್ನು ಇದುವರೆಗೆ 2000 ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಆ್ಯಪ್ ಮೂಲಕ ಅಪರಾಧ ಪ್ರಕರಣಗಳ ಕುರಿತ ದೂರು– ಮಾಹಿತಿ ಕೊಟ್ಟಿದ್ದಾರೆ.
ಹತ್ತಿರದ ಪೊಲೀಸ್ ಠಾಣೆ ಯಾವುದು? ಎಲ್ಲಿದೆ? ಎಷ್ಟು ದೂರದಲ್ಲಿ ಇದೆ? ಅಪರಾಧ ಘಟನೆಗಳು ನಡೆದ ಸಂದರ್ಭದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ರವಾನಿಸುವುದು ಹೇಗೆ? ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವುದು ಹೇಗೆ?... ಮೊದಲಾದ ಪ್ರಶ್ನೆಗಳಿಗೆ ಖಚಿತ ಉತ್ತರವುಳ್ಳ ಆ್ಯಪ್ ಅನ್ನು ಐಜಿಪಿ ಎಸ್.ಮುರುಗನ್ ಮಾರ್ಚ್ 21ರಂದು ಬಿಡುಗಡೆ ಮಾಡಿದ್ದರು.
ತುರ್ತು ಸಂದರ್ಭಗಳಲ್ಲಿ ಯಾವ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸ ಬೇಕು? ಕಂಟ್ರೋಲ್ ರೂಂಗೆ ಮಾಹಿತಿ ನೀಡುವುದು ಹೇಗೆ? ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳ ಸರಹದ್ದುಗಳು, ಎಲ್ಲ ಪ್ರಮುಖ ಅಧಿಕಾರಿಗಳ ದೂರ ವಾಣಿ ಸಂಖ್ಯೆಗಳು ಆ್ಯಪ್ನಲ್ಲಿವೆ.ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಆತ್ಮರಕ್ಷಣೆಗೆ ಮತ್ತು ತಕ್ಷಣ ಪೊಲೀಸರಿಗೆ ಮತ್ತು ಕುಟುಂಬದ ಸದಸ್ಯರಿಗೆ ಮಾಹಿತಿ ರವಾನಿಸುವುದಕ್ಕೆ ಅನುಕೂಲವಾಗುವಂತೆ ಆ್ಯಪ್ ಅನ್ನು ರೂಪಿಸಲಾಗಿದ್ದು, ಈ ಬಗೆಯ ಬಳಕೆ ಮಾಡಿದವರು ಅತಿ ವಿರಳ.
‘ದೂರುದಾರರು ಅಪರಾಧ ಘಟನೆ ಗಳ ಮಾಹಿತಿಯನ್ನು ಆ್ಯಪ್ ಮೂಲಕ ನೀಡಿದ ಕೂಡಲೇ, ಅವರು ಇರುವ ಸ್ಥಳ, ಅವರ ಕುರಿತ ಮಾಹಿತಿಗಳು ಕಂಟ್ರೋಲ್ ರೂಂಗೆ ಲಭ್ಯವಾಗುತ್ತದೆ. ಕೂಡಲೇ ಸಿಬ್ಬಂದಿ ಸಂಬಂಧಿಸಿದ ಠಾಣೆಗೆ ಮಾಹಿತಿ ರವಾನಿಸುತ್ತಾರೆ. ಇದು ಕ್ಷಿಪ್ರಗತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಲು ಅನು ಕೂಲಕರವಾಗಲಿದೆ’ ಎಂದು ಐಜಿಪಿ ತಿಳಿಸಿದ್ದರು.
ಆರೇಳು ಮಂದಿ: ಆದರೆ ಡೌನ್ಲೋಡ್ ಮಾಡಿಕೊಂಡವರ ಸಂಖ್ಯೆಗೆ ಹೋಲಿಸಿ ದರೆ, ದೂರು–ಮಾಹಿತಿ ನೀಡಿದವರ ಸಂಖ್ಯೆ ನಿರಾಶೆದಾಯಕವಾಗಿದೆ. ಇದುವ ರೆಗೆ ಆರೇಳು ಮಂದಿ ಮಾತ್ರ ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ಆರ್.ಚೇತನ್ ‘ಪ್ರಜಾವಾಣಿ’ಗೆ ತಿಳಿಸಿದರು.‘ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸ ಬೇಕಾದ ಕಂಟ್ರೋಲ್ ರೂಂ, ವಿವಿಧ ಆಸ್ಪತ್ರೆಗಳು, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಆಪತ್ತಿಗೆ ನೆರವಾಗುವ ದೂರವಾಣಿ ಸಂಖ್ಯೆಗ ಳನ್ನೂ ಆ್ಯಪ್ನಲ್ಲಿ ಸೇರಿಸಲಾಗಿದೆ. ಜಿಲ್ಲೆ ಯಲ್ಲಿ ವಾಹನ ದಟ್ಟಣೆಯ ಮಾಹಿತಿ ಕೂಡ ಲಭ್ಯವಿದೆ. ಯಾವುದೋ ಒಂದು ಬಗೆಯಲ್ಲಿ ಆ್ಯಪ್ ಪ್ರಯೋಜನಕಾರಿ ಆಗಬೇಕು ಎಂಬುದೇ ಇಲಖೆಯ ಉದ್ದೇಶ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.