ವಿಜಯ ವಿಠಲ ದೇವಸ್ಥಾನವೂ ಸಂರಕ್ಷಿತ ಸ್ಮಾರಕವಾಗಿದೆ. ಅದರ ಸೌಂದರ್ಯಕ್ಕೆ ಕುಂದು ಬಾರದಿರಲಿ ಎಂದು ಪುರಾತತ್ವ ಸರ್ವೇಕ್ಷಣ ಇಲಾಖೆಯು ಇಂಧನಚಾಲಿತ ವಾಹನಗಳ ಸಂಚಾರ ನಿರ್ಬಂಧಿಸಿದೆ. ಅಲ್ಲಿಗೆ ಹೋಗಿ ಬರಲು ಬ್ಯಾಟರಿಚಾಲಿತ ವಾಹನಗಳಿಗೆ ವ್ಯವಸ್ಥೆ ಮಾಡಿದೆ. ವಿಶೇಷ ಭದ್ರತೆ ಹೊಂದಿದವರಿಗೆ ಅವರ ಕೆಲವು ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಆದರೆ, ಸಿನಿಮಾ ಚಿತ್ರೀಕರಣದ ಹೆಸರಿನಲ್ಲಿ ಮಂಗಳವಾರ ಅನೇಕ ವಾಹನಗಳು ನಿಯಮ ತೂರಿ ಎಲ್ಲೆಡೆ ಬೇಕಾಬಿಟ್ಟಿ ಸಂಚರಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ‘ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?’, ತಾನೇ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಲು ಅನುಮತಿ ಕೊಟ್ಟರೆ ಹೇಗೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.