ಹೂವಿನಹಡಗಲಿ: ಪಟ್ಟಣದ 9ನೇ ವಾರ್ಡಿನ ವಸತಿ ಬಡಾವಣೆಯೊಂದರ ಬಯಲಲ್ಲಿ ಆಯೋಜನೆಗೊಂಡಿದ್ದ ಟಗರಿನ ಕಾಳಗ ಜೂಜು ಅಡ್ಡೆಯ ಮೇಲೆ ಪೊಲೀಸರು ಶನಿವಾರ ದಾಳಿ ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಾಯಕ ನಗರ ಕೂಡು ರಸ್ತೆ ಸಮೀಪದ ಬಯಲಲ್ಲಿ ಅನಧಿಕೃತವಾಗಿ ಟಗರು ಕಾಳಗ ಆಯೋಜನೆಗೊಂಡಿತ್ತು. ಗದಗ, ದಾವಣಗೆರೆಯಿಂದ ಆಹ್ವಾನಿಸಿದ್ದ ಬಲಶಾಲಿ ಟಗರುಗಳ ಮೇಲೆ ಭಾರೀ ಪ್ರಮಾಣದ ಬೆಟ್ಟಿಂಗ್ ನಡೆದಿತ್ತು.
ಪಟ್ಟಣ ಸೇರಿದಂತೆ ಗದಗ, ದಾವಣಗೆರೆ, ಹರಪನಹಳ್ಳಿಯಿಂದ ಬಂದಿದ್ದ ಕೆಲವರು ತಮ್ಮ ನೆಚ್ಚಿನ ಟಗರುಗಳ ಮೇಲೆ ₹10 ಸಾವಿರದಿಂದ ಆರಂಭಿಸಿ ₹50 ಸಾವಿರವರೆಗೆ ಬಾಜಿ ಕಟ್ಟಿ ಸ್ಪರ್ಧೆ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಿಪಿಐ ಸುಧೀರ್ ಬೆಂಕಿ ಮಾರ್ಗದರ್ಶನದಲ್ಲಿ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಜೂಜುಕೋರರು, ಕಾಳಗ ವೀಕ್ಷಣೆಗೆ ಬಂದಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಎರಡು ಟಗರು, ₹250 ನಗದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟಗರುಗಳನ್ನು ಕರೆ ತಂದಿದ್ದ ಗದಗ ನಗರದ ಬಸವರಾಜ ದಾನಿ, ಅಶೋಕ ಚಿಮ್ಮಳಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.