ಪ್ರಜಾವಾಣಿ ವಾರ್ತೆ
ಕೂಡ್ಲಿಗಿ: ಪಟ್ಟಣ ಪಂಚಾಯ್ತಿಯಿಂದ ನೂತನವಾಗಿ ನಿರ್ಮಾಣ ಮಾಡಿರುವ ಆಶ್ರಯ ನಿವೇಶನಗಳನ್ನು ಹಂಚಿಕೆ ಮಾಡದಂತೆ ಧಾರವಾಡ ಹೈಕೋರ್ಟಿನಿಂದ ತಡೆಯಾಜ್ಞೆ ತರಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಮುಖಂಡ ಗುನ್ನಳಿ ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿನ ನಿರ್ಗತಿಕರಿಗೆ, ವಿದವೆಯರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಅಂಗವಿಕಲರಿಗೆ,ದೇವದಾಸಿಯರಿಗೆ ಮನೆಗಳನ್ನು ನೀಡುವಂತೆ ಅಂದಿನ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರನ್ನು ಒತ್ತಾಯಿಸಲಾಗಿತ್ತು. ಇದರ ಅಂಗವಾಗಿ ಇಂತವರ ಪಟ್ಟಿ ಮಾಡಿ ಪಟ್ಟಣ ಪಂಚಾಯ್ತಿಗೆ ನೀಡುವಂತೆ ಶಾಸಕರು ಹೇಳಿದ್ದರು.
ಅದರಂತೆ ನಾವು ಆರ್ಹ ಫಲಾನುಭಾವಿಗಳ ಪಟ್ಟಿಯನ್ನು ಪಟ್ಟಣ ಪಂಚಾಯ್ತಿಗೆ ಸಲ್ಲಿಸಿದ್ದೆವು. ಇದನ್ನು ಪರಿಶೀಲಿಸಿದ್ದ ಪಟ್ಟಣ ಪಂಚಾಯ್ತಿ ಪಟ್ಟಿಯನ್ನು ಅಂಗೀಕಾರ ಮಾಡಿತ್ತು. ಆದರೆ ಹಾಲಿ ಶಾಸಕರದ ಡಾ. ಶ್ರೀನಿವಾಸ್ ಎನ್.ಟಿ. ಅವರು ಮೊದಲಿನ ಪಟ್ಟಿಯನ್ನು ಬಿಟ್ಟು ಇತ್ತೀಚೆಗೆ ಸಿದ್ದಪಡಿಸಿದ ಫಲಾನುಭವಿಗಳ ಪಟ್ಟಿಗೆ ಸಹಿ ಮಾಡಿದ್ದಾರೆ. ಆದರೆ ಶಾಸಕರು ಸಹಿ ಮಾಡಿರುವ ಪಟ್ಟಿಯಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದ್ದು, ಅವುಗಳನ್ನು ಸರಿಪಡಿಸುವಂತೆ ಪಟ್ಟಣ ಪಂಚಾಯ್ತಿಗೆ ಸಾಕಷ್ಟು ಬಾರಿ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗದ ಕಾರಣ ನಮ್ಮ ಸಂಘಟನೆಯ ಮೂಲಕ ಕೋರ್ಟ್ ಮೂಲಕ ತಡೆಯಜ್ಞೆ ತರಲಾಗಿದೆ ಎಂದು ಅವರು ವಿವರಿಸಿದರು.
ವಾಲ್ಮೀಕಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ.ಪಂಪಾಪತಿ ಮಾತನಾಡಿ, ಆಶ್ರಯ ಮನೆಗಳ ಹಂಚಿಕೆ ಮಾಡಲು ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ಇರುತ್ತದೆ. ಆದರೆ ಈ ಹಿಂದಿಯೂ ಆಶ್ರಯ ಮನೆಗಳ ಹಂಚಿಕೆ ಮಾಡಿದ್ದಾಗಲು ಸರ್ಕಾರಿ ನೌಕರರು, ಸಾವಿರಾರು ರೂಪಾಯಿ ಟ್ಯಾಕ್ಸ್ ಕಟ್ಟುವವರಿಗೂ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಈಗಲು ಸಹ ಇದು ನಡೆದಿದೆ. ಇನ್ನಾದರೂ ಆರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಿ ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲ್ಲೂಕು ಅಧ್ಯಕ್ಷ ಕರಿಯಣ್ಣ, ಸಹ ಕಾರ್ಯದರ್ಶಿ ಮರಳಸಿದ್ದ ಆಚಾರಿ,ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಭಾಗ್ಯಮ್ಮ, ಡಿಎಚ್ ಎಸ್ ತಾಲ್ಲೂಕು ಅಧ್ಯಕ್ಷ ಚಂದ್ರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.