ವಿಜಯನಗರ (ಹೊಸಪೇಟೆ): ರಾಜ್ಯ ಬಜೆಟ್ನಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಕುರಿ ಮತ್ತು ಮೇಕೆ ಮಹಾಮಂಡಲಕ್ಕೆ ₹2,000 ಕೋಟಿ ಮೀಸಲಿಡಬೇಕು ಎಂದು ವಿಜಯನಗರ ಜಿಲ್ಲೆ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಆಗ್ರಹಿಸಿದೆ.
ಸಂಘದ ಮುಖಂಡರು ಈ ಸಂಬಂಧ ಮಂಗಳವಾರ ನಗರದಲ್ಲಿ ಗ್ರೇಡ್–2 ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಬೆಟ್ಟ, ಗುಡ್ಡ, ಅರಣ್ಯ ಪ್ರದೇಶಗಳಲ್ಲಿ ಚಳಿ, ಮಳೆ, ಗುಡುಗು, ಸಿಡಿಲು, ಮಿಂಚು ಎನ್ನದೆ ಹಗಲು ರಾತ್ರಿ ಕುರಿಗಾರರು ಕುರಿ ಮೇಯಿಸುತ್ತಿದ್ದಾರೆ. ಅವರಿಗೆ ಸರ್ಕಾರದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಕುರಿ, ಮೇಕೆ ಮೃತಪಟ್ಟರೆ ₹5,000, ಕುರಿಗಾಹಿ ಸಾವನ್ನಪ್ಪಿದರೆ ₹3 ಲಕ್ಷ ಪರಿಹಾರ ಯೋಜನೆ ಸ್ಥಗಿತಗೊಳಿಸಲಾಗಿದೆ. ಈ ಹಿಂದಿನಂತೆಯೇ ಯೋಜನೆ ಮುಂದುವರೆಸಬೇಕು. ಪ್ರತಿ ಹೋಬಳಿಗಳಲ್ಲಿ ಗೋ ಶಾಲೆ ಮಾದರಿಯಲ್ಲಿ ಕುರಿ ಹಟ್ಟಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಮಜ್ಜಿಗಿ ನಾಗರಾಜ, ಉಪಾಧ್ಯಕ್ಷ ಜೊಂಡಿಗಿ ಲಿಂಗಪ್ಪ, ತಾಲ್ಲೂಕು ಅಧ್ಯಕ್ಷ ಬಿಸಾಟಿ ತಾಯಪ್ಪ, ಮುಖಂಡರಾದ ಭರಮನಗೌಡ, ಸಿದ್ದೇಶ್, ದೇವರಾಜ್ ಚೌಕಿ, ಲೋಕೇಶ್, ರವಿಶಂಕರ ದೇವರಮನಿ, ಕೆ.ಪ್ರಸಾದ್, ಎಲ್.ಐ.ಸಿ. ಗೋವಿಂದ, ಕೆ.ರಾಘು, ಎಚ್.ಮಹೇಶ್ ಇದ್ದರು.