ಕಂಪ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ನರೇಗಾ ಕೂಲಿ ಕಾರ್ಮಿಕರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಂಘಟನೆ ತಾಲ್ಲೂಕು ಸಂಚಾಲಕಿ ವಿ. ಪವಿತ್ರಾ, ‘ಪ್ರತಿ ಕೂಲಿ ಕಾರ್ಮಿಕರಿಗೆ ನೂರು ದಿನ ಕೆಲಸ ಮತ್ತು ₹316 ಕೂಲಿ ನಿಗದಿಯಾಗಿದ್ದರೂ ಸಮರ್ಪಕವಾಗಿ ಯಾವುದೂ ದೊರೆಯುತ್ತಿಲ್ಲ’ ಎಂದು ಆರೋಪಿಸಿದರು.
‘ಅರ್ಜಿ ಸಲ್ಲಿಸಿದರೂ ಕೂಲಿ ಕೆಲಸ ನೀಡುತ್ತಿಲ್ಲ. ಒಂದು ವೇಳೆ ಕೆಲಸ ನಿರ್ವಹಿಸಿದರೂ ನಿಗದಿಗಿಂತ ಕಡಿಮೆ ಕೂಲಿ ನೀಡಲಾಗುತ್ತಿದೆ’ ಎಂದು ದೂರಿದರು.
‘ಕಾಯಕ ಬಂಧುಗಳಿಗೆ ಗೌರವಧನ ಮಂಜೂರು ಮಾಡಬೇಕು. ಎಮ್ಮಿಗನೂರು ಗ್ರಾಮದ ಮುದ್ದಾಪುರ ಸಣ್ಣ ಜಡೆಪ್ಪ ಕೂಲಿ ಕೆಲಸದ ಸ್ಥಳದಲ್ಲಿ ಮೃತಪಟ್ಟಿದ್ದು, ಆ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಮಲ್ಲನಗೌಡ ಮನವಿ ಸ್ವೀಕರಿಸಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಸಂಘಟನೆ ತಾಲ್ಲೂಕು ಸಂಚಾಲಕಿ ವಾಣಿ, ಹರಪನಹಳ್ಳಿಯ ಸಂಚಾಲಕಿ ಭಾಗ್ಯ, ಬಳ್ಳಾರಿ ಜಿಲ್ಲಾ ಸಂಚಾಲಕಿ ಅಕ್ಕಮ್ಮ, ನರೇಗಾ ಕಾರ್ಮಿಕರಾದ ಅಶ್ವಿನಿ, ಹುಲಿಗೆಮ್ಮ, ಅಂಬಮ್ಮ, ರಾಮಣ್ಣ, ಹನುಮಂತಮ್ಮ, ಬಸವರಾಜ ಸೇರಿದಂತೆ ವಿವಿಧ ಹಳ್ಳಿಗಳ ಕಾರ್ಮಿಕರು ಹಾಜರಿದ್ದರು.