ಕೊಟ್ಟೂರು: ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಕಡಿಮೆ ವೋಲ್ಟೇಜ್ ನಿಂದ ಪಂಪ್ ಸೆಟ್ಗಳು ಚಾಲನೆಗೊಳ್ಳದೆ ರೈತರು ಪರದಾಡುವಂತಹ ಪರಿಸ್ಥಿತಿ ತಾಲ್ಲೂಕಿನಾದ್ಯಂತ ನಿರ್ಮಾಣವಾಗಿದೆ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಭರಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಜೆಸ್ಕಾಂ ಇಲಾಖೆಯ ಕೂಡ್ಲಿಗಿ ಉಪವಿಭಾಗದ ಎಇಇ ಪ್ರಕಾಶ್ ಪತ್ತೇನೂರ್ ಇವರಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದರು.
ಕಳೆದ 20 ದಿನಗಳಿಂದ ಮಳೆಯಾಗದ ಕಾರಣ ಬೆಳೆಗಳು ಒಣಗುತ್ತಿವೆ ಹಾಗಾಗಿ ಕೊಳವೆ ಬಾವಿಗಳ ಸೌಲಭ್ಯ ಹೊಂದಿರುವ ರೈತರು ನೀರು ಹಾಯಿಸಲು ಮುಂದಾದರೆ ವಿದ್ಯುತ್ ಕಡಿತ ಹಾಗೂ ಕಡಿಮೆ ವೋಲ್ಟೇಜ್ ಪೂರೈಕೆಯಿಂದ ರೈತರು ರೋಸಿ ಹೋಗಿದ್ದಾರೆ ಎಂದರು.
ಇಲಾಖಾಧಿಕಾರಿಗಳು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆಗೆ ಇಳಿಯುವುದಾಗಿ ಎಚ್ಚರಿಸಿದರು.
ಎಇಇ ಪ್ರಕಾಶ್ ಪತ್ತೇನೂರ್ ಮನವಿ ಸ್ವೀಕರಿಸಿ ಮಾತನಾಡಿ, ಕೂಡಲೇ ಅಗತ್ಯ ವೋಲ್ಟೇಜ್ ಹಾಗೂ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರೈತ ಸಂಘದ ಪದಾಧಿಕಾರಿಗಳಾದ ಕೆ.ಎಸ್.ಜಯಪ್ರಕಾಶ್ ನಾಯ್ಕ, ಜಂಬೂರು ಮರುಳಸಿದ್ಧಪ್ಪ, ಶ್ರೀಧರ್ ಒಡೆಯರ್, ಚಪ್ಪರದಹಳ್ಳಿ ಕೊಟ್ರೇಶಪ್ಪ, ಅಯ್ಯನಹಳ್ಳಿ ಭಾಗ್ಯಪ್ಪ, ರಮೇಶ ನಾಯ್ಕ, ಬಸವರಾಜಪ್ಪ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.