ಹೊಸಪೇಟೆ: ಗುರು ಪೌರ್ಣಿಮೆ ಪ್ರಯುಕ್ತ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠಕ್ಕೆ ಕೈಗೊಂಡಿರುವ ಗುರುದರ್ಶನ ಯಾತ್ರೆಗೆ ಸೋಮವಾರ ನಗರದಲ್ಲಿ ಚಾಲನೆ ನೀಡಲಾಯಿತು.
ಉಕ್ಕಡಕೇರಿಯಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಗುಜ್ಜಲ್ ಶಿವರಾಮಪ್ಪ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ’ಪ್ರತಿ ವರ್ಷ ಗುರು ಪೌರ್ಣಿಮೆಯ ಪ್ರಯುಕ್ತ ಕೇರಿಯ ಯುವಕರು ರಾಜನಹಳ್ಳಿಗೆ ಹೋಗಿ ಭಜನೆ, ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷ 60 ಕೇರಿಯ ಯುವಕರು ಹೋಗುತ್ತಿದ್ದಾರೆ’ ಎಂದು ತಿಳಿಸಿದರು.
‘ರಾಜನಹಳ್ಳಿಯಲ್ಲಿ ಪುಣ್ಯಾನಂದಪುರಿ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸುತ್ತಾರೆ. ನಂತರ ಈಗಿನ ಗುರುಗಳಾದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಂದ ದರ್ಶನ ಪಡೆದು, ಹಿಂತಿರುಗುವರು’ ಎಂದು ಹೇಳಿದರು.
ಸಮಾಜದ ಮುಖಂಡರಾದ ಜಂಬಯ್ಯ ನಾಯಕ, ಕಟಗಿ ರಾಮಕೃಷ್ಣ, ಮಾರ್ಕಂಡಯ್ಯ, ಜಿ. ಎಸ್. ಕರೆಹನುಮಂತಪ್ಪ, ರಾಮಪುರ ಪರಶುರಾಮ, ಗುಜ್ಜಲ್ ನಾಗರಾಜ ಇದ್ದರು.