ಹೂವಿನಹಡಗಲಿ: ‘ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಿದ ಏಕೀಕರಣ ಹೋರಾಟಗಾರರು ಅವಿಸ್ಮರಣೀಯರು’ ಎಂದು ಶಾಸಕ ಎಲ್.ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಜಿ.ಪಿ.ಜಿ. ಕಾಲೇಜಿನ ಮಹಾತ್ಮ ಗಾಂಧೀಜಿ ವೇದಿಕೆಯಲ್ಲಿ ಬುಧವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಆಲೂರು ವೆಂಕಟರಾಯರು, ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಯಂತಹ ಮಹನೀಯರ ತ್ಯಾಗ, ಹೋರಾಟದ ಫಲವಾಗಿ ಕರ್ನಾಟಕ ಏಕೀಕೃತಗೊಂಡಿದೆ. ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಂಡು ಮಹನೀಯರ ಆಶಯಗಳನ್ನು ಗೌರವಿಸಬೇಕು’ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಕೆ.ಶರಣಮ್ಮ ಮಾತನಾಡಿ, ಕವಿಗಳಾದ ನೃಪತುಂಗ, ಪಂಪ, ಮಹಾಲಿಂಗ ರಂಗ ಅವರು ಕನ್ನಡದ ಹಿರಿಮೆಯನ್ನು ಆ ಕಾಲದಲ್ಲೇ ವರ್ಣಿಸಿದ್ದಾರೆ. ಜೀವನಕ್ರಮಕ್ಕಾಗಿ ಬೇರೆ ಭಾಷೆ ಕಲಿಯುವುದು ತಪ್ಪಲ್ಲ, ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಉಳಿಸಿ, ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ಉಪನ್ಯಾಸಕ ಡಾ. ಕೆ. ಸತೀಶ ಉಪನ್ಯಾಸ ನೀಡಿದರು.
ತಾಲ್ಲೂಕು ಪಂಚಾಯಿತಿ ಇಒ ಜಯರಾಂ ಎಂ.ಚವ್ಹಾಣ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಪೂಜಾರ್, ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ, ಬಿಸಿಎಂ ವಿಸ್ತರಣಾಧಿಕಾರಿ ಎಂ.ಪಿ.ಎಂ. ಅಶೋಕ, ಕಸಾಪ ಅಧ್ಯಕ್ಷ ಟಿ.ಪಿ.ವೀರೇಂದ್ರ, ಸಿಡಿಪಿಒ ಅವಿನಾಶ್, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಅಂಬೇಡ್ಕರ್, ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ, ವಲಯ ಅರಣ್ಯಾಧಿಕಾರಿ ಎ.ರೇಣುಕಮ್ಮ, ಪಿಡಬ್ಲೂಡಿ ಎಇಇ ಹೊನ್ನಪ್ಪ, ಜೆಸ್ಕಾಂ ಎಇಇ ಕೇದಾರನಾಥ ಇದ್ದರು.
ವಿವಿಧ ಕ್ಷೇತ್ರಗಳ ಸಾಧಕರಾದ ಉಮ್ಮನಗೌಡ, ಟಿ.ಪರಮೇಶ್ವರಪ್ಪ, ಎಸ್.ಅಶ್ವಥನಾರಾಯಣ, ಸೋಮಶೇಖರ ಬಳಿಗಾರ, ಟಿ. ಬಸವನಗೌಡ, ಗಡ್ಡಿ ಗುಡ್ಡಪ್ಪ, ರಾಮಪ್ಪ ಕೋಟಿಹಾಳ, ಬಾರಿಕರ ದ್ಯಾಮಮ್ಮ, ಶಿವನಾಗಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ್ ಜೈನ್, ಅರ್ಚನಾ ಜೋಷಿ ಸಂಗಡಿಗರು ಕನ್ನಡ ಗೀತೆ ಹಾಡಿದರು. ಭುವನೇಶ್ವರ ಭಾವಚಿತ್ರದೊಂದಿಗೆ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಭಾತ್ಪೇರಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.