ಕುರುಗೋಡು: ಜಗದ್ಗುರು ಹಜರತ್ ಖಾಜಾ ಸೈಯದ್ ಷಾ ಖಾದರಲಿಂಗ ಸಾಹೇಬ್ (ಸ್ವಾಮಿ) ಎರಡನೇ ವರ್ಷದ ಉರುಸ್ ಶುಕ್ರವಾರ ಅದ್ಧೂರಿಯಾಗಿ ಜರುಗಿತು.
ಉರುಸ್ ಅಂಗವಾಗಿ ಗುರುವಾರ ರಾತ್ರಿ ಗಂಧದ ಮೆರವಣಿಗೆ ಜರುಗಿತು. ಪಟ್ಟಣದ ಹೇಮದ್ ಬಾಷಾ ಅವರ ಮನೆಯಿಂದ ಪ್ರಾರಂಭಗೊಂಡ ಗಂಧದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಪಟ್ಟಣದ ಕಂಪ್ಲಿರಸ್ತೆಯಲ್ಲಿರುವ ಗದ್ದುಗೆ ಸ್ಥಳದಲ್ಲಿ ಸಮಾವೇಶಗೊಂಡಿತು. ತಾಸಿರಾಮ್, ರಾಮ್ ಡೋಲ್, ಹಲಗೆ, ಕೊಂಬು, ಕಹಳೆ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು.
ಉರುಸ್ ಅಂಗವಾಗಿ ಗುರುವಾರ ಬೆಳಿಗ್ಗೆಯಿಂದ ಜಗದ್ಗುರು ಹಜರತ್ ಖಾಜಾ ಸೈಯದ್ ಷಾ ಖಾದರಲಿಂಗ ಸಾಹೇಬ್ (ಸ್ವಾಮಿ) ಗದ್ದುಗೆ ಸ್ಥಳದಲ್ಲಿ ವಿಶೇಷ ಪೂಜೆ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಪಟ್ಟಣವೂ ಸೇರಿದಂತೆ ವಿವಿಧ ಜಿಲ್ಲೆ ಮತ್ತು ನೆರೆಯ ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಸಾಲಿನಲ್ಲಿ ನಿಂತು ಜಗದ್ಗುರು ಹಜರತ್ ಖಾಜಾ ಸೈಯದ್ ಷಾ ಖಾದರಲಿಂಗ ಸಾಹೇಬ್ ಗದ್ದುಗೆ ದರ್ಶನ ಪಡೆದು, ಹೂ, ಹಣ್ಣು, ಕಾಯಿ, ಕೆಂಪುಸಕ್ಕರೆ ಸಮರ್ಪಿಸಿ ಭಕ್ತಿ ಮೆರೆದರು.
ಉರುಸ್ ಅಂಗವಾಗಿ ಎರಡು ದಿನಗಳಿಂದ ಜರುಗಿದೆ ವಿವಿಧ ಕಾರ್ಯಕ್ರಮದ ವೈಭವವನ್ನು ಕಂಣ್ತುಂಬಿಕೊಂಡರು. ಶನಿವಾರ ಜಯಾರತ್ ಕಾರ್ಯಕ್ರಮ ಜರುಗಲಿದೆ. ಉರುಸ್ನಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದರು.