ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಮೈತ್ರಿಯಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ!

Published 21 ಮಾರ್ಚ್ 2024, 5:50 IST
Last Updated 21 ಮಾರ್ಚ್ 2024, 5:50 IST
ಅಕ್ಷರ ಗಾತ್ರ

ಬಳ್ಳಾರಿ: ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿವೆಯಾದರೂ, ಸ್ಥಳೀಯ ಮಟ್ಟದಲ್ಲಿ ಅದರ ಲಕ್ಷಣಗಳೇ ಕಾಣಿಸುತ್ತಿಲ್ಲ. ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿರುವ ಬಿಜೆಪಿ, ತನ್ನ ಮಿತ್ರ ಪಕ್ಷಕ್ಕೆ ಸಭೆ, ಸಮಾರಂಭದಲ್ಲಿ ಸ್ಥಾನವನ್ನೇ ನೀಡುತ್ತಿಲ್ಲ. 

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಿ.ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಲಾಗಿದೆ. ಶ್ರೀರಾಮುಲು ಅವರು ಬಳ್ಳಾರಿ–ವಿಜಯನಗರ ಅವಳಿ ಜಿಲ್ಲೆಯಲ್ಲಿ ಈಗಾಗಲೇ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ. ಆದರೆ, ಮಿತ್ರ ಪಕ್ಷಗಳಿಂದ ಈವರೆಗೆ ಜಂಟಿ ಪ್ರಚಾರ ನಡೆದೇ ಇಲ್ಲ. ಕನಿಷ್ಠ ಪಕ್ಷ ಎರಡೂ ಪಕ್ಷಗಳ ನಾಯಕರು ಒಂದು ಕಡೆ ಕುಳಿತು ಸಭೆ ಮಾಡಿ, ಚರ್ಚೆಯೂ ನಡೆಸಿಲ್ಲ. ಬಿಜೆಪಿಯ ಈ ನಡೆ ಸ್ಥಳೀಯ ಜೆಡಿಎಸ್‌ ಮುಖಂಡರಲ್ಲಿ ಅಸಮಾಧಾನ ಮೂಡಿಸಿದೆ.

ಜೆಡಿಎಸ್‌ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಮೀನಳ್ಳಿ ತಾಯಣ್ಣ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ  ‘ಬುಧವಾರ ನಡೆದ ಕಾರ್ಯಕ್ರಮದ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಅಭ್ಯರ್ಥಿ ಆದ ಬಳಿಕ ಶ್ರೀರಾಮುಲು ಅವರು ಒಮ್ಮೆ ನನ್ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರಷ್ಟೇ. ಬಿಜೆಪಿ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ಕ್ಷೇತ್ರ ಬಿಟ್ಟುಕೊಟ್ಟವರು ನಾವು. ನಮ್ಮ ಅಗತ್ಯ ಇರುವುದು ಬಿಜೆಪಿಗೆ. ನಾವು ಅವರಿಗೆ 25 ಕ್ಷೇತ್ರ ನೀಡಿದ್ದೇವೆ. ನಮ್ಮನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆ ಅಮಿತ್‌ ಶಾ ಅವರಿಗೆ ಮನವರಿಕೆ ಮಾಡುವುದಾಗಿ ಪಕ್ಷದ ನಾಯಕರಾದ ಎಚ್‌.ಡಿ ಕುಮಾರಸ್ವಾಮಿ ಅವರು ತಿಳಿಸಿದ್ಧಾರೆ. ನಮ್ಮನ್ನು ಬಳಸಿಕೊಳ್ಳಬೇಕಾದ್ದು ಅವರ ಧರ್ಮ. ಇಲ್ಲವೇ ಅವರ ಕರ್ಮ’ ಎಂದು ಹೇಳಿದರು. 

ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ರೇಶ್ ಮಾತನಾಡಿ, ‘ಒಂದು ಬಾರಿ ಸುದ್ದಿಗೋಷ್ಠಿಗೆ ಕರೆದಿದ್ದರು. ಅದರ ನಂತರ ಅವರು ಕರೆಯಲೇ ಇಲ್ಲ. ವಿಶ್ವಾಸಕ್ಕೆ ತೆಗೆದುಕೊಳ್ಳೋದು ಅವರ ಕರ್ತವ್ಯ. ಇನ್ನೂ ಸೀಟು ಹಂಚಿಕೆ ಅಂತಿಮಗೊಂಡಿಲ್ಲ. ಅದರ ನಂತರ ಬಿಜೆಪಿಯು ನಮ್ಮನ್ನು ವಿಶ್ವಾಸಕ್ಕೆ  ಪಡೆಯಬಹುದು. ಹಾಗೇನಾದರೂ ನಮ್ಮನ್ನು ಗಣನೆಗೆ ತೆಗೆದುಕೊಳ್ಳದೇ ಹೋದರೆ, ವರಿಷ್ಠರ ಆದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇವೆ‘ ಎಂದರು.  

ಇನ್ನು ಕ್ಷೇತ್ರ ವ್ಯಾಪ್ತಿಯಲ್ಲಿರುವ ಏಕೈಕ ಜೆಡಿಎಸ್‌ ಶಾಸಕ, ಹಗರಿಬೊಮ್ಮನಹಳ್ಳಿಯ ನೇಮರಾಜ ನಾಯ್ಕ ಅವರು ಈ ಬಗ್ಗೆ ಮಾತನಾಡಿ, ‘ಶ್ರೀರಾಮುಲು ಅವರು ಒಮ್ಮೆ ದೂರವಾಣಿಯಲ್ಲಿ ಮಾತನಾಡಿದ್ದರು. ಒಮ್ಮೆ ಸ್ಥಳೀಯವಾಗಿ ಸಿಕ್ಕಿದ್ದರು. ನಂತರ ಬೇರೆ ಬೆಳವಣಿಗೆಗಳು ಆಗಿಲ್ಲ. ಮೈತ್ರಿ ಧರ್ಮ ಪಾಲನೆ ವಿಷಯ ಚರ್ಚಿಸಲೆಂದೇ ಸಭೆ ಕರೆಯುತ್ತಿದ್ದೇವೆ. ಮೈತ್ರಿ ಧರ್ಮ ಪಾಲನೆ ವಿಚಾರವಾಗಿ ಚರ್ಚಿಸುತ್ತೇವೆ. ಶಿವಮೊಗ್ಗ, ಕಲಬುರಗಿಯಲ್ಲಿ ಸಣ್ಣ ಅಸಮಾಧಾನ ಆಗಿತ್ತು. ವರಿಷ್ಠರು ಸಮನ್ವಯತೆ ಕಾದು ಕೊಳ್ಳಬೇಕು ಎಂದು ನಮಗೆಲ್ಲ ಹೇಳಿದ್ದಾರೆ. ಮೈತ್ರಿಯ ದೊಡ್ಡ ಲಾಭ ಆಗುವುದು ಜೆಡಿಎಸ್‌ ಪಕ್ಷಕ್ಕಲ್ಲ ಬಿಜೆಪಿಗೆ‘ ಎಂದು ಹೇಳಿದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ ಕುಮಾರ್‌ ಮೋಕಾ ಅವರನ್ನು ಸಂಪರ್ಕಿಸಿದಾಗ ‘ಮೈತ್ರಿ ಧರ್ಮ ಪಾಲನೆಯಲ್ಲಿ ಎರಡನೇ ಮಾತೇ ಇಲ್ಲ. ಸಮನ್ವಯತೆ ಸಾಧಿಸಲು ಆಗದ ಕಾರಣದಿಂದ ಈ ವರೆಗಿನ ಸಭೆ ಸಮಾರಂಭಗಳಿಗೆ ಜೆಡಿಎಸ್‌ ಅನ್ನು ಆಹ್ವಾನಿಸಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ‘ ಎಂದು ತಿಳಿಸಿದರು. 

ಚುನಾವಣೆಯಲ್ಲಿ ಕಳಪೆ ಸಾಧನೆ

ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ ಪಕ್ಷವು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಕ್ಷೇತ್ರಗಳಲ್ಲಿ ತೀರ ಕಳಪೆ ಸಾಧನೆ ಮಾಡಿತ್ತು. ಹಗರಿಬೊಮ್ಮನಹಳ್ಳಿಯಲ್ಲಿ 84,023 ಮತ ಪಡೆದು ನೇಮರಾಜ ನಾಯ್ಕ ಅವರು ಶಾಸಕರಾಗಿದ್ದು ಬಿಟ್ಟರೆ, ಬೇರೆಲ್ಲ ಕ್ಷೇತ್ರಗಳಲ್ಲಿ ಅದರ ಸಾಧನೆ ಮೂರಂಕಿ ದಾಟಿದ್ದೇ ಸಾಧನೆ ಎಂಬಂತಿದೆ. ಬಳ್ಳಾರಿ ನಗರದಲ್ಲಿ 610 ಮತ ಪಡೆದರೆ, ಸಂಡೂರು–2617, ಹೂವಿನ ಹಡಗಲಿ–1847, ಕಂಪ್ಲಿ –1374, ಕೂಡ್ಲಿಗಿ–3138 ಮತ ಪಡೆದಿತ್ತು. ಇನ್ನುಳಿದಂತೆ ವಿಜಯನಗರ ಮತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರಗಳಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರಲಿಲ್ಲ. 

ಇನ್ನು ಲೋಕಸಭಾ ಚುನಾವಣೆ ವಿಚಾರಕ್ಕೆ ಬಂದರೆ, ಕಳೆದ ಚುನಾವಣೆ ಮತ್ತು ಅದಕ್ಕೆ ಹಿಂದಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಜೆಡಿಎಸ್‌ ಬೆಂಬಲ ನೀಡಿತ್ತು. 2014ರ ಚುನಾವಣೆಯಲ್ಲಿ 12,613 ಮತ ಪಡೆದಿತ್ತು. 2004ರಲ್ಲಿ 2,47,842 ಮತ ಪಡೆದು ಮೂರನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿತ್ತು. ಅದಕ್ಕೂ ಹಿಂದೆ 1999ರಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸಿ ಗೆದ್ದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ 28,855 ಮತ ಪಡೆದಿದ್ದರು.

ಪ್ರತಿ ಚುನಾವಣೆಯಲ್ಲೂ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಸಾಗಿರುವ ಜೆಡಿಎಸ್‌ ಬಳ್ಳಾರಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಇದೇ ಆಧಾರದಲ್ಲೇ ಜೆಡಿಎಸ್‌ ಅನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಭಿಪ್ರಾಯಗಳೂ ಕ್ಷೇತ್ರ ವ್ಯಾಪ್ತಿಯಲ್ಲಿವೆ.

ರಾಜ್ಯದ 14 ಜಿಲ್ಲೆಗಳಲ್ಲಿ ಜೆಡಿಎಸ್‌ ನಿರ್ಣಾಯಕ ವಾಗಿದೆ.  ನಾವಂತೂ ಪ್ರಾಮಾಣಿಕವಾಗಿ ಮೈತ್ರಿ ಧರ್ಮ ಪಾಲಿಸುತ್ತೇವೆ.ಬಿಜೆಪಿ ಕೂಡ ಗಣನೆಗೆ ತೆಗೆದುಕೊಳ್ಳಬೇಕು
ನೇಮರಾಜ ನಾಯ್ಕ, ಹಗರಿಬೊಮ್ಮನಹಳ್ಳಿ ಜೆಡಿಎಸ್‌ ಶಾಸಕ
ಜೆಡಿಎಸ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಜೆಡಿಎಸ್‌ ಅಧ್ಯಕ್ಷ ಮೀನಳ್ಳಿ ತಾಯಣ್ಣ ಅವರೊಂದಿಗೆ ಮಾತುಕತೆಯನ್ನೂ ಮಾಡಿದ್ದೇನೆ. ಅವರನ್ನೂ ಜೊತೆಗೆ ಕರೆದುಕೊಂಡು ಹೋಗಲಾಗುವುದು 
ಬಿ. ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT