ಹೊಸಪೇಟೆ: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಎಲ್ಲ ಕುಟುಂಬಗಳಿಗೆ ಸಮಗ್ರ ಆಹಾರ ಕಿಟ್ ವಿತರಿಸುವುದು, ₹5,000 ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿ ಜನಾಗ್ರಹ ಆಂದೋಲಯ ಸಂಘಟನೆಯ ಕಾರ್ಯಕರ್ತರು ಮಂಗಳವಾರ ನಗರದ ರಾಣಿಪೇಟೆಯಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೋವಿಡ್ನಿಂದ ಅನೇಕ ಬಡ ಕುಟುಂಬಗಳು ಅನಾಥವಾಗಿವೆ. ಅವರ ಆರ್ಥಿಕ ಮಟ್ಟ ಕುಸಿದು ಹೋಗಿದೆ. ಅನೇಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರು ಬದುಕು ಕಟ್ಟಿಕೊಳ್ಳಲು ₹5 ಲಕ್ಷ ಪರಿಹಾರ ನೀಡಬೇಕು ಎಂದು ಬಳಿಕ ಸಚಿವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಕೋವಿಡ್ನಿಂದ ರೈತರು ಕೂಡ ತೊಂದರೆಗೆ ಸಿಲುಕಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರಕ್ಕೆ ಸಬ್ಸಿಡಿ ನೀಡಬೇಕು. ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆ ಇನ್ನಷ್ಟು ಬಲಪಡಿಸಬೇಕು. ಕೋವಿಡ್ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ಕೊಡಬೇಕು. ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಕರಿಯಪ್ಪ ಗುಡಿಮನಿ, ಜೆ. ಕಾಳಿದಾಸ, ಕೆ. ಲಕ್ಷ್ಮಣ, ರಾಮಲಿ, ಎಂ. ವಿರೂಪಾಕ್ಷ, ಸಂತೋಷ್, ಶೇಖರ್, ವೆಂಕಟಪ್ಪ, ರುದ್ರಪ್ಪ ಇದ್ದರು.