ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪ: 809 ಎಕರೆ ವಕ್ಫ್‌ ಆಸ್ತಿ ಅನಧಿಕೃತ ಒತ್ತುವರಿ

ಪ್ರಭಾವಿಗಳ ಕೈವಾಡ, ಅನುದಾನ ದುರ್ಬಳಕೆ, ಪರಭಾರೆ; ಪ್ರಕರಣ ದಾಖಲು
ಚಾಂದ್ ಬಾಷ
Published 19 ಫೆಬ್ರುವರಿ 2024, 5:43 IST
Last Updated 19 ಫೆಬ್ರುವರಿ 2024, 5:43 IST
ಅಕ್ಷರ ಗಾತ್ರ

ಸಿರುಗುಪ್ಪ: ತಾಲ್ಲೂಕಿನಾದ್ಯಂತ ರಾಜ್ಯ ವಕ್ಫ್ ಮಂಡಳಿಗೆ ಸೇರಿದ ನೂರಾರು ಎಕರೆ ಭೂಮಿ ಬಹುತೇಕ ಪ್ರಭಾವಿಗಳ ಕೈಯ್ಯಲ್ಲಿದ್ದು, ಅನಧಿಕೃತ ಒತ್ತುವರಿ ಹಾಗೂ ಪರಭಾರೆಯಿಂದಾಗಿ ವಕ್ಷ್ ಆಸ್ತಿ ರಕ್ಷಣೆಯೇ ಸವಾಲಾಗಿ ಪರಿಣಮಿಸಿದೆ.

ವ್ಯವಸ್ಥಾಪನ ಸಮಿತಿ ರಚನೆಯೇ ಕಗ್ಗಂಟು: ವಕ್ಫ್ ಆಸ್ತಿ ರಕ್ಷಣೆಗೆ ಇರಬೇಕಾದ ಸ್ಥಳೀಯ ಸಂಸ್ಥೆಗಳ ಆಯ್ಕೆಯೇ ಗಗನ ಕುಸುಮವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ನಗರದ ಜಾಮಿಯಾ ಮಸೀದಿಯ ಸಮಿತಿ ಕಳೆದ 4 ವರ್ಷಗಳಿಂದ ರಚನೆ ಆಗಿಯೇ ಇಲ್ಲ.

‘ಜಾಮಿಯಾ ಮಸೀದಿಯ ಖಾತೆಯಲ್ಲಿ ಸುಮಾರು ₹40 ಲಕ್ಷ ಜಮೆ ಇದೆ. ಅಲ್ಲದೆ ಮಸೀದಿ ಹೆಸರಿನಲ್ಲಿ 129 ಎಕರೆ 27 ಸೆಂಟ್ಸ್ ಭೂಮಿ ಇದ್ದು, ಇದರ ವ್ಯವಸ್ಥಾಪನಾ ಸಮಿತಿ ರಚನೆ ಆಗದೇ ಇರುವುದರಿಂದ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ ಸುಧಾರಣೆಗೆ ಕೈಗೊಳ್ಳಬಹುದಾದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ' ಎನ್ನುತ್ತಾರೆ ಸಮಾಜದ ಮುಖಂಡ ಚಿಟಗಿ ಹುಸೇನ್ ಸಾಬ್.

ವಕ್ಫ್‌ ಕಾಯ್ದೆ ಸೆಕ್ಷನ್‌ 54 (ಒತ್ತುವರಿ)ರಲ್ಲಿ 53 ಪ್ರಕರಣಗಳನ್ನು ದಾಖಲಿಸಲಾಗಿದ್ದು, 4 ಪ್ರಕರಣಗಳ ವಿಲೇವಾರಿ ಆಗಿದೆ. ಈ ಪೈಕಿ 3 ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದು, 50 ‍ ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಸೆಕ್ಷನ್ 54ರ ಎಲ್ಲ ಪ್ರಕರಣಗಳು ವಕ್ಫ್‌ ಸೆಕ್ಷನ್ 52 (ಪರಭಾರೆ)ರಲ್ಲಿ ದಾಖಲಿಸಬೇಕಾಗಿದೆ. ಇತ್ತೀಚಿಗೆ ಮುದ್ಧಟನೂರು ಗ್ರಾಮದ 1.26 ಎಕರೆ ಹಾಗೂ ಸಿರುಗುಪ್ಪ ಸೌದಾಗರ್ ಮಸೀದಿಯ 5.40 ಸೆಂಟ್ಸ್ ಆಸ್ತಿಯನ್ನು ಮರಳಿ ವಕ್ಫ್‌ಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಕೇಂದ್ರೀಕರಣಗೊಳ್ಳದ ವಕ್ಷ್ ಮಂಡಳಿ:

ಪ್ರತಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿರುವ ವಕ್ಫ್ ಮಂಡಳಿಯು ತನ್ನ ಅಧಿಕಾರ ವಿಕೇಂದ್ರೀಕರಣಗೊಳಿಸದೆ ಇರುವುದ ರಿಂದ ಪ್ರತಿಯೊಂದು ತೀರ್ಮಾನಕ್ಕೂ ರಾಜ್ಯ ವಕ್ಷ್ ಮಂಡಳಿ ಪರವಾನಿಗೆ ಪಡೆಯಬೇಕಾಗಿದೆ ಇದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ತಾಲ್ಲೂಕು ಮಟ್ಟದಲ್ಲಿ ವಕ್ಷ್ ಕಚೇರಿ ಇಲ್ಲದಿರುವುದು, ಇನ್ನೂ ಆನ್ ಲೈನ್ ಗೆ ಬದಲಾಗದ ಕೇಂದ್ರ ಕಚೇರಿ, ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ, ಅನುಷ್ಠಾನಗೊಳ್ಳದ ‘ಸಕಾಲ’ ಯೋಜನೆ ಇದರಿಂದ ಭೂ ವ್ಯಾಜ್ಯಗಳು ನಿಧಾನಗತಿಯಲ್ಲಿ ಸಾಗಿ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿರುವುದು ಕಂಡುಬರುತ್ತಿದೆ.

₹40 ಲಕ್ಷ ಅನುದಾನ ದುರ್ಬಳಕೆ ಆರೋಪ
ಇನ್ನು ವಕ್ಫ್‌ ಆಸ್ತಿಗಳ ಸಂರಕ್ಷಣೆಗಾಗಿ ಆಸ್ತಿಗಳ ಸುತ್ತ ತಡೆಗೋಡೆ, ಕಾಂಪೌಂಡ್ ನಿರ್ಮಾಣ, ಜೀರ್ಣೋದ್ಧಾರಕ್ಕೆ 2016 ರಿಂದ 2022 ವರೆಗೆ ₹40 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿತ್ತು. ವ್ಯವಸ್ಥಾಪನಾ ಸಮಿತಿಗಳ ಅಧಿಕಾರದ ಅವಧಿ ಮುಕ್ತಾಯವಾಗಿದ್ದು, ಕೆಲವು ಕಡೆ ಹೊಸ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಈವರೆಗೆ ₹40 ಲಕ್ಷಕ್ಕೆ ಸಂಬಂಧಿಸಿದಂತೆ ಬಳಕೆ ಪ್ರಮಾಣ ಪತ್ರ ಸಲ್ಲಿಸದೇ ಇರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಅನುದಾನ ದುರ್ಬಳಕೆ ಮಾಡಿದ ಆರೋಪದ ಮೇಲೆ 23 ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ವಕ್ಷ್ ಅಧಿಕಾರಿ ತಿಳಿಸಿದ್ದಾರೆ.

ವಕ್ಫ್ ಆಸ್ತಿ ವಶ ಮೀನಮೇಷ

ಸಿರುಗುಪ್ಪ ನಗರ ಸೇರಿದಂತೆ ತಾಲ್ಲೂಕಿನ ತೆಕ್ಕಲಕೋಟೆ, ದೇಶನೂರು, ಹಳೇಕೋಟೆ, ಕೆಂಚನಗುಡ್ಡ, ಸಿರಿಗೇರಿ, ಇಡಗಿಹಾಳ್, ನಾಡಂಗ, ಮುದೇನೂರು, ಬಾಗೇವಾಡಿ ಸೇರಿದಂತೆ ವಿವಿಧ ಗ್ರಾಮಗಳ ಒಟ್ಟು 809 ಎಕರೆ 98 ಸೆಂಟ್ಸ್ ವಕ್ಫ್ ಆಸ್ತಿ ಇದ್ದು, ಕೆಲವೆಡೆ ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ.

ಇದರಲ್ಲಿ ಬಹಳಷ್ಟು ವಕ್ಫ್ ಆಸ್ತಿಯನ್ನು ವೈಯಕ್ತಿಕ ಹೆಸರಿಗೆ ಮಾಡಿಕೊಂಡಿರುವವರ ಪ್ರಮಾಣವೇ ಹೆಚ್ಚಾಗಿದೆ. ಇದನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಇಲಾಖೆ ನಿಧಾನಗತಿಯಲ್ಲಿ ಮಾಡುತ್ತಿದೆ.

ವಕ್ಷ್ ಆಸ್ತಿ ಒತ್ತುವರಿ ಹಾಗೂ ಪರಭಾರೆ ಪ್ರಕರಣಗಳನ್ನು ಗುರುತಿಸಲಾಗಿದ್ದು ಯಾರೇ ಪ್ರಭಾವಿಗಳಿರಲಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು
ಹುಮಾಯೂನ್ ಖಾನ್ಅಧ್ಯಕ್ಷ, ಜಿಲ್ಲಾ ವಕ್ಷ್ ಮಂಡಳಿ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT