ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ್ದ ಗಂಗಾವತಿ ಭೀಮಪ್ಪನವರ ತಾಲ್ಲೂಕು ಕ್ರೀಡಾಂಗಣಕ್ಕೆ ಶುಕ್ರವಾರ ಜೀವ ಕಳೆ ಬಂದಿತ್ತು, ಬಿಸಿಲಿನ ತಾಪಮಾನ ಲೆಕ್ಕಿಸದೇ ಸಾವಿರಾರು ಜನ ಸೇರಿದ್ದರು, ಕುಸ್ತಿ ಪಂದ್ಯಾವಳಿಗೆ ನಿರ್ಮಿಸಿದ್ದ ಅಖಾಡ ರಂಗೇರಿತ್ತು. ಬಿಸಿಲು ಚುರುಕು ಮುಟ್ಟಿಸಿದರೂ ಜನರು ಮಾತ್ರ ಕುಸ್ತಿಯನ್ನು ಧ್ಯಾನಸ್ಥರಾಗಿ ವೀಕ್ಷಿಸಿದರು.
ವೆಂಕಟೇಶ್ವರ ರಥೋತ್ಸವದ ಅಂಗವಾಗಿ ನಾಣಿಕೇರಿ ದೈವಸ್ಥರು ಶುಕ್ರವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯ ದೃಶ್ಯಗಳು, ವಿವಿಧ ರಾಜ್ಯಗಳಿಂದ ಬಂದಿದ್ದ ಪೈಲ್ವಾನರ ಕಾದಾಟ ಪ್ರೇಕ್ಷಕರಿಗೆ ನಿಜವಾದ ರಸದೌತಣ ನೀಡಿತ್ತು.
ರಾಷ್ಟ್ರೀಯ ಕುಸ್ತಿ ಪೈಲ್ವಾನರಾದ ಹರಿಯಾಣದ ವಿಕ್ಕಿ ಚಹರ್ ಮತ್ತು ದೆಹಲಿಯ ಮೊನು ಪೈಲ್ವಾನ್ ಅವರಿಬ್ಬರೂ ಮದ ಗಜಗಳಂತೆ ಕಾದಾಡಿದರು. ಪಟ್ಟಿಗೆ ಪಟ್ಟು ಹಾಕುತ್ತಾ ಕೊನೆಯ ಪಂದ್ಯವಾದರೂ, ರಾತ್ರಿ ಆದರೂ ಜನರು ಕದಲದೇ ಕಳಿತು ವೀಕ್ಷಿಸುವಂತೆ ಮಾಡಿದರು, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿರುವ ವಿಕ್ಕಿ ಚಹರ್ ಕಲ್ಲರ್ಜಿಂಗ್, ಏಕಲಾಂಗ್, ಸವಾರಿ, ಹೊರಕಾಲು ಸೇರಿದಂತೆ ಅನೇಕ ಪಟ್ಟುಗಳನ್ನು ಪ್ರದರ್ಶಿಸಿ ಎದುರಾಳಿ ಮೊನು ಪೈಲ್ವಾನ್ ಅವರಿಗೆ ಮಣ್ಣು ಮುಕ್ಕಿಸಿದರು. ಇವರಿಬ್ಬರ 20ನಿಮಿಷಗಳ ಹೋರಾಟವನ್ನು ನೆರೆದಿದ್ದ ಸಾವಿರಾರು ಜನ ಕುಸ್ತಿ ಪ್ರಿಯರು ಕಣ್ಣು ಮಿಟುಕಿಸದೇ ವೀಕ್ಷಿಸಿದರು.
ಮತ್ತೊಂದು ಪಂದ್ಯದಲ್ಲಿ ಪಂಜಾಬ್ ಕೇಸರಿ ವಿಜೇತ ಹ್ಯಾಪಿ ಸಿಂಗ್ ಮತ್ತು ಉತ್ತರ ಪ್ರದೇಶದ ಕರಣ್ಸಿಂಗ್ ಅವರ ಹೋರಾಟ ಜಿದ್ದಾಜಿದ್ದಿಯಿಂದ ಕೂಡಿತ್ತು, ಸತತ 40ನಿಮಿಷಗಳ ಕಾದಾಟದಲ್ಲಿ ಯಾರೂ ಸೋಲೊಪ್ಪಿಕೊಳ್ಳದೇ ಸಮಬಲ ಸಾಧಿಸಿದರು. ಸೆಣೆಸಾಟದಲ್ಲಿ ಇಬ್ಬರ ದೇಹಗಳು ಕೆಸರು ಎರೆಚಿದಂತೆ ಆಗಿದ್ದವು. ಪಂದ್ಯದ ಕೊನೆಯ ಗಳಿಗೆಯವರೆಗೂ ಪ್ರೇಕ್ಷರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು.
ಇದಕ್ಕೂ ಮುನ್ನ ನಡೆದ ರೋಚಕ ಕಾದಾಟದಲ್ಲಿ ಹಂಪಿ ಕೇಸರಿ ಪುರಸ್ಕøತ ಹರಪನಹಳ್ಳಿಯ ಕೆಂಚಪ್ಪ ಮಹಾರಾಷ್ಟ್ರದ ಲಾತೂರ್ನ ಸಚಿನ್ ಅವರನ್ನು ಚಿತ್ ಮಾಡಿ ನಗದು ಬಹುಮಾನ ಪಡೆದರು. ಮರಿಯಮ್ಮನಹಳ್ಳಿಯ ಹನುಮಂತ, ಮಹಾರಾಷ್ಟ್ರದ ಗೋರಾ ಅವರನ್ನು, ಹರಪನಹಳ್ಳಿಯ ಇರ್ಶಾದ್ ಅವರು ಪಂಜಾಬ್ ನ ವಿಕಾಸ್ ಅವರನ್ನು, ಹರಪನಹಳ್ಳಿಯ ರಿಯಾಜ್ ಹೊಸಪೇಟೆಯ ರಘು ಅವರನ್ನು ಮಣಿಸಿದರು.
ಕೊಲ್ಲಾಪುರದ ಶರಣ್ಕುಮಾರ್ ಮತ್ತು ಹರಪನಹಳ್ಳಿಯ ತಿಪ್ಪಣ್ಣ ನಡುವೆ 30ನಿಮಿಷಗಳಿಗೂ ಅಧಿಕ ಕಾಲ ಕಾದಾಟ ನಡೆದರೂ ಕೊನೆಗೆ ಸಮಬಲದಿಂದ ಮುಕ್ತಾಯಗೊಂಡಿತು.
ಪೈಲ್ವಾನರು ತಮ್ಮ ತಂತ್ರಗಳನ್ನು ಪ್ರಯೋಗಿಸಿದಾಗಲೊಮ್ಮೆ ನೆರೆದಿದ್ದ ಪ್ರೇಕ್ಷಕರಿಂದ ಶಿಳ್ಳೆ, ಕೇಕೆಗಳಿಂದ ಅಭಿನಂದಿತರಾದರು.
ನಾಣಿಕೇರಿಯ ಮುಖಂಡರಾದ ಹುಳ್ಳಿ ಪ್ರಕಾಶ್, ಸೆರೆಗಾರ ಹುಚ್ಚಪ್ಪ, ನಾಗಪ್ಪ, ಹನುಮಂತಪ್ಪ, ರಾಮಚಂದ್ರಪ್ಪ, ಕನಕಪ್ಪ, ಬಾಳಪ್ಪ, ಮಡಿವಾಳರ ಹುಲುಗಪ್ಪ ನಿರ್ಣಾಯಕರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.