ಹೊಸಪೇಟೆ (ವಿಜಯನಗರ): ‘ಕೇಂದ್ರ ಸರ್ಕಾರದ ತೆರಿಗೆ ನೀತಿಗಳಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ದಕ್ಷಿಣ ಭಾರತ ಪ್ರಾಂತೀಯ ಬಳ್ಳಾರಿ ಶಾಖೆಯ ಸದಸ್ಯ ಪನ್ನರಾಜು ಎಸ್. ಹೇಳಿದರು.
ಕೋಟ್ಯಂತರ ರೂಪಾಯಿ ಸಂಪತ್ತು ಹೊಂದಿರುವವರು ಶೇ 3ರಷ್ಟು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ, ಪ್ರತಿಯೊಂದರ ಮೇಲೆ ತೆರಿಗೆ ವಿಧಿಸಿರುವುದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಅಸಮಾನ ಆದಾಯ ಹಂಚಿಕೆ ಆಗುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ನೋಟು ರದ್ದತಿ, ಅಸಮರ್ಪಕ ಜಿಎಸ್ಟಿ ಜಾರಿ, ಕೋವಿಡ್ನಿಂದ ದೇಶದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಬಾಗಿಲು ಮುಚ್ಚಿವೆ. ಸುಮಾರು 50 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ದೇಶದಲ್ಲಿ ಕೃಷಿ ಹಾಗೂ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದು. ಸಣ್ಣ ಕೈಗಾರಿಕೆಗಳಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಅಸಮಾನತೆ ಹೋಗಲಾಡಿಸಬೇಕಾದರೆ ಕೃಷಿ ಹಾಗೂ ಎಂಎಸ್ಎಂಇ ಕ್ಷೇತ್ರ ಬಲಪಡಿಸಬೇಕು. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಎಂಎಸ್ಎಂಇ ಪಾಲು ಶೇ 40ರಷ್ಟಿದೆ. ದೇಶದ ಶೇ 1ರಷ್ಟು ಜನರ ಬಳಿ ಶೇ 40ರಷ್ಟು ಹಾಗೂ ಶೇ 3ರಷ್ಟು ಜನರ ಬಳಿ ಶೇ 50ರಷ್ಟು ದೇಶದ ಸಂಪತ್ತು ಇದೆ. ಆದಾಯ ಹಂಚಿಕೆ ಸರಿಸಮನಾಗಿ ಆಗುತ್ತಿಲ್ಲ. ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ. ಇದಕ್ಕೆ ಸರ್ಕಾರದ ನೀತಿಗಳೇ ಕಾರಣ. ಎಂಎಸ್ಎಂಇ ಕ್ಷೇತ್ರವನ್ನು ಬಲಪಡಿಸಿದರೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಬಹುದು ಎಂದು ತಿಳಿಸಿದರು.
ಬಳ್ಳಾರಿ ಶಾಖೆಯ ಅಧ್ಯಕ್ಷ ವಿನೋದ ಭಾಗರೇಚ, ಕಾರ್ಯದರ್ಶಿ ಗಜರಾಜ, ಖಜಾಂಚಿ ಪುರುಷೋತ್ತಮ್ ರೆಡ್ಡಿ, ಸದಸ್ಯರಾದ ಮಂಜುನಾಥ, ಮಹೇಂದ್ರ ಸೋನಿ, ಗವಿಸಿದ್ದಪ್ಪ ಹಿಟ್ನಾಳ್, ಅಜ ಸಾಬ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.