ಕಮಲಾಪುರ (ಹೊಸಪೇಟೆ ತಾಲ್ಲೂಕು): ವರನಟ ರಾಜಕುಮಾರ ಅವರು ಅವರ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ರಾಜಕಾರಣದ ಛಾಯೆ ಬೀಳದಂತೆ ಎಚ್ಚರ ವಹಿಸಿದ್ದರು. ನಟನೆಯಲ್ಲಿ ವಿಧೇಯ ವಿದ್ಯಾರ್ಥಿಯಾಗಿದ್ದ ಅವರು ಅವರಿಗೆ ಗೊತ್ತಿಲ್ಲದಂತೆ ಕನ್ನಡದ ಅಸ್ಮಿತೆಯ ಜವಾಬ್ದಾರಿ ಹೊತ್ತು ಕನ್ನಡದ ಐಕಾನ್ ಆಗಿ ಬದಲಾಗಿದ್ದರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಸಿ.ಆರ್.ಗೋವಿಂದರಾಜು ತಿಳಿಸಿದರು.
ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ರಾಜಕುಮಾರ ಅಧ್ಯಯನ ಪೀಠ ಹಮ್ಮಿಕೊಂಡಿದ್ದ ‘ಕನ್ನಡದ ಅಸ್ಮಿತೆ’ ಮತ್ತು ರಾಜಕುಮಾರ ಸಿನಿಮಾ ಹಾಡುಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರಾಜಕುಮಾರ ಅವರು ಅಮೂರ್ತ ಸ್ವರೂಪದ ಸಂಕೀರ್ಣ ನೆಲೆಗಳಲ್ಲಿ ನಮ್ಮೆಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ಅಲಕ್ಷಿತ ನೆಲೆಗಳನ್ನು ತಾರತಮ್ಯದ ನೆಲೆಗಳನ್ನು ಗೆಲ್ಲಬಲ್ಲೆನೆಂಬ ವಿಶ್ವಾಸ ಅವರಿಗಿತ್ತು’ ಎಂದರು.
‘ತಾನು ತಪ್ಪಾಗಿ ನಡೆದುಕೊಂಡರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ಎಚ್ಚರ ರಾಜಕುಮಾರ ಅವರಿಗೆ ಇತ್ತು. ಅವರ ಚಲನಚಿತ್ರಗಳಲ್ಲಿ ಅಶ್ಲೀಲ ಸಂಭಾಷಣೆ ಇರಲಿಲ್ಲ. ಸೇಂದಿ, ಸಾರಾಯಿ, ಸಿಗರೇಟ್ ಸೇವನೆಯಂಥಹ ದೃಶ್ಯಗಳು ಇರಲಿಲ್ಲ. ಹಾಗಾಗಿಯೇ ಅವರ ಚಲನಚಿತ್ರಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಹೇಳಿದರು.
ಕುಲಸಚಿವ ಡಿ. ಪಾಂಡುರಂಗಬಾಬು ಮಾತನಾಡಿ, ‘ಜಗತ್ತನ್ನು ಓದಲು ಚಲನಚಿತ್ರಗಳು ಆಕರ ಸಾಮಗ್ರಿಗಳಾಗಿವೆ. ಬೌದ್ಧಿಕ ಜಗತ್ತು ರಾಜಕುಮಾರ ಅವರನ್ನು ಹತ್ತಿರ ಕರೆದುಕೊಳ್ಳಬೇಕಿದೆ ಎಂದರು.
‘ರಾಜ್ ಉದ್ಯಾನ ಅಭಿವೃದ್ಧಿಗೆ ಕ್ರಮ’
ಬಳ್ಳಾರಿ: ‘ನಗರದ ಡಾ.ರಾಜಕುಮಾರ್ ಉದ್ಯಾನ ಅಭಿವೃದ್ಧಿಗೆ ಚುನಾವಣೆ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ತಿಳಿಸಿದರು.
ಉದ್ಯಾನದಲ್ಲಿ ಮಂಗಳವಾರ ರಾಜ್ ಅವರ 90ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ‘ಉದ್ಯಾನದ ಅಭಿವೃದ್ಧಿಗೆ ಸಂಬಂಧಿಸಿ ಚುನಾವಣೆ ಪಕ್ರಿಯೆ ಮುಗಿದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.