ಹೊಸಪೇಟೆ: ಸಮುದಾಯಕ್ಕೆ ಸಾಮರ್ಥ್ಯವಿದ್ದರೂ ವಿಭಿನ್ನ ಹೆಸರುಗಳಿಂದ ಕರೆಯುತ್ತಾ, ಹರಿದು ಹಂಚಿರುವ ಪದ್ಮಶಾಲಿ ಸಮಾಜವನ್ನು ಸಂಘಟಿಸಬೇಕಾಗಿದೆ. ಆ ಮೂಲಕ ಸಮುದಾಯದ ಶಕ್ತಿ ಪ್ರದರ್ಶಿಸಬೇಕು ಎಂದು ತೆಲಂಗಾಣ ರಾಜ್ಯದ ರಾಜ್ಯಸಭಾ ಸದಸ್ಯ ರಾಪೋಲು ಆನಂದಭಾಸ್ಕರ್ ಹೇಳಿದರು.
ಭಾನುವಾರ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಪದ್ಮಶಾಲಿ ಸಮಾಜದ ಉತ್ತರ ಕರ್ನಾಟಕ ಪ್ರಾಂತೀಯ ಸಂಘದ 2ನೇ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಂಧ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಸಮಾಜ ಸಂಘಟನೆಯನ್ನು ತೀಕ್ಷ್ಣವಾಗಿ ನಡೆಸಲಾಗುತ್ತಿದೆ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಂಘಟನೆಯಾಗಬೇಕಿದ್ದು ಸಮುದಾಯನ್ನು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಲಗೊಳಿಸುವುದು ಸಂಘಟನೆಯ ಮುಖ್ಯ ಉದ್ದೇಶ ಎಂದರು.
ಹರಿಹರದ ಗುತ್ತೂರು ಸಿದ್ಧಾಶ್ರಮದ ಪ್ರಭುಲಿಂಗ ಸ್ವಾಮಿಜೀ, ಗುಳೇದಗುಡ್ಡದ ಜಗದ್ಗುರು ಬಸವರಾಜ ಪಟ್ಟದಾರ್ಚಾಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಪದ್ಮಶಾಲಿ ಸಂಘದ ಅಧ್ಯಕ್ಷ ಜೀನಿ ರಾಮಮೂರ್ತಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಮಾಜಿ ಸಂಸದ ಕೆ.ಸಿ.ಕೊಂಡಯ್ಯ , ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಕೊಂಕತಿ ಕಾಳಪ್ಪ, ಶೀಲಾ ಚಿನ್ನ ಬ್ರಹ್ಮಯ್ಯ, ಬೋಡಾ ರಾಮಪ್ಪ ಸೇರಿದಂತೆ ಉತ್ತರ ಕರ್ನಾಟಕ ಪ್ರಾಂತೀಯ ಸಂಘದ ಪದಾಧಿಕಾರಿಗಳು ಸಮಾಜದ ಅನೇಕರು ಪಾಲ್ಗೊಂಡಿದ್ದರು.