ದೇವನಹಳ್ಳಿ: ತಾಲ್ಲೂಕು ಆಡಳಿತ ಸಂಕೀರ್ಣ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಬಳಿ ಏ.14 ರಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು ಎಂದು ಚಲವಾದಿ ಮಹಾ ಸಭಾ ತಾಲ್ಲೂಕು ಘಟಕ ಅಧ್ಯಕ್ಷ ಕೆ.ವಿ.ಸ್ವಾಮಿ ಹೇಳಿದರು .
ಇಲ್ಲಿನ ಡಿ.ಆರ್ ವಿ.ಪ್ಲಾಜಾದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಐದು ವರ್ಷಗಳಿಗೊಮ್ಮೆ ನಡೆಯುವ ವಿಧಾನ ಸಭೆ ಮತ್ತು ಲೋಕ ಸಭೆ ಚುನಾವಣೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲೆ ಅಧಿಸೂಚನೆ ಹೊರಡಿಸುವುದರಿಂದ ಅದ್ದೂರಿ ಜಯಂತಿಗೆ ಚುನಾವಣಾ ನೀತಿ ಸಂಹಿತೆ ಅಡ್ಡ ಬರುತ್ತಿದೆ. ಅಂಬೇಡ್ಕರ್ ವಿಚಾರ ಧಾರೆಗಳು, ನಡೆಸಿದ ಜೀವನ, ಅವರ ವ್ಯಕ್ತಿತ್ವ ಮತ್ತು ಸಿದ್ಧಾಂತ ಬಗ್ಗೆ ಉಪನ್ಯಾಸ ನೀಡುವಂತಿಲ್ಲ ಎಂದು ಹೇಳಿದರು.
ವಾರ್ಷಿಕ ಜಯಂತಿ ಸಮಾರಂಭದಲ್ಲಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಈ ಬಾರಿ ಇಲ್ಲ. ವಿವಿಧ ಕ್ಷೇತ್ರದಲ್ಲಿನ ಸಾಧಕರನ್ನು ಗೌರವಿಸುವ ವ್ಯವಸ್ಥೆ ಇರುವುದಿಲ್ಲ. ಇಂತಹ ಸಂದಿಗ್ಧ ಸ್ಥಿತಿ ಮುಂದಿನ ವರ್ಷ ಇರುವುದಿಲ್ಲ ಎಂದು ಹೇಳಿದರು.
14 ರಂದು ಬೆಳಿಗ್ಗೆ 9ಕ್ಕೆ ಪ್ರತಿಮೆ ಬಳಿ ಸೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡಬೇಕಾಗಿದೆ. ಎಲ್ಲರು ಸಕಾಲದಲ್ಲಿ ಬಂದು ನಮನ ಸಲ್ಲಿಸಬೇಕಾಗಿದೆ ಎಂದು ಹೇಳಿದರು.
ಚಲವಾದಿ ಮುಖಂಡರಾದ ರೆಡ್ಡಿಹಳ್ಳಿ ಮುನಿರಾಜು, ಮಾರುತಿ, ಪ್ರಕಾಶ್, ಜಿ.ಸುರೇಶ್, ಜಿ.ರಮೇಶ್, ಕಾರಹಳ್ಳಿ ಕೆಂಪಣ್ಣ, ಅತ್ತಿಬೆಲೆ ನರಸಪ್ಪ, ಶ್ರೀನಿವಾಸ್ ಗಾಂಧಿ ಇದ್ದರು.