ಆನೇಕಲ್: ಆರ್.ವಿ. ಕಾಲೇಜಿನಲ್ಲಿ ಓದುತ್ತಿದ್ದ ಬಿಹಾರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಶುಕ್ರವಾರ ಜಿಗಣಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ಅಮೃತೇಶ್ ಪಾಂಡೆ (21) ಈ ವಿಷಯ ಪೋಷಕರಿಗೆ ತಿಳಿಯುತ್ತದೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರ್.ವಿ ಕಾಲೇಜಿನಲ್ಲಿ ಮೂರನೇ ವರ್ಷದ ಎಂಜಿನಿಯರ್ ಓದುತ್ತಿದ್ದ ಆತ ಎರಡು ವಿಷಯದಲ್ಲಿ ಅನುತ್ತೀರ್ಣನಾಗಿದ್ದ. ಕಾಲೇಜಿಗೂ ಸರಿಯಾಗಿ ಹೋಗುತ್ತಿರಲಿಲ್ಲ.
ಕಾಲೇಜು ಹಾಸ್ಟೆಲ್ನಲ್ಲಿ ವಾಸವಾಗಿದ್ದ ಅಮೃತೇಶ್ ಮತ ಹಾಕುವ ಸಲುವಾಗಿ ಈಚೆಗೆ ಪೋಷಕರು ವಾಸವಾಗಿರುವ ಜಿಗಣಿಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರನೇ ಸೆಮಿಸ್ಟರ್ ಪ್ರವೇಶ ಸಂದರ್ಭದಲ್ಲಿ ಪೋಷಕರನ್ನು ಜೊತೆಗೆ ಕರೆ ತರಲು ತಿಳಿಸಲಾಗಿತ್ತು. ಪೋಷಕರು ಕಾಲೇಜಿಗೆ ಬಂದರೆ ತಾನು ಅನುತ್ತೀರ್ಣನಾಗಿರುವ ವಿಷಯ ಅವರಿಗೆ ತಿಳಿಯುತ್ತದೆ ಎಂದು ಹೆದರಿ ಮೇ 10ರಂದು ಜಿಗಣಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಗೆ ಬಾರದ ಪುತ್ರನನ್ನು ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಶನಿವಾರ ಸಂಜೆ ಮೃತ ದೇಹ ಜಿಗಣಿ ಕೆರೆಯಲ್ಲಿ ಪತ್ತೆಯಾಗಿದೆ. ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.