ಬೆಂಗಳೂರು: ‘370ನೇ ವಿಧಿ 35ಎ ಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಎಲ್ಲಾ ರಾಜ್ಯಗಳಂತೆ ದೇಶದ ಭಾಗವನ್ನಾಗಿ ಮಾಡಿರುವುದು ಸ್ವಾಗತಾರ್ಹ’ ಎಂದು ಬಿಜೆಪಿ ತಾಲ್ಲೂಕು ಘಟಕದ ಮುಖಂಡ ಕನಕರಾಜು ಸಂತಸ ವ್ಯಕ್ತಪಡಿಸಿದರು.
ನಗರದ ಗಾಂಧಿಚೌಕದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
‘ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮಾಡಿದ್ದ ಪ್ರಮಾದದಿಂದಾಗಿ ಕಾಶ್ಮೀರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಕಾಶ್ಮೀರ ಎಂಬುದು ಪ್ರತ್ಯೇಕ ದೇಶವೆಂಬಂತಾಗಿತ್ತು. ಈಗ 370 ವಿಧಿಯನ್ನು ರದ್ದುಗೊಳಿಸಿದ್ದರಿಂದ ಇಷ್ಟು ವರ್ಷಗಳ ಕಾಲದ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಚ.ವಿಜಯಬಾಬು ಮಾತನಾಡಿ, ‘ಜಮ್ಮು ಕಾಶ್ಮೀರ ಎಂಬುದು ಈ ದೇಶದ ಶಿರಸ್ಸು. ಅದನ್ನು ಬೇರೆ ಮಾಡುವುದಾಗಲಿ, ಬೇರೆಯವರಿಗೆ ಬಿಟ್ಟುಕೊಡುವುದು ಅಸಾಧ್ಯವಾದ ಕಾರ್ಯವಾಗಿತ್ತು. ಲೋಕಸಭಾ ಚುನಾವಣೆಗೂ ಮುನ್ನ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ 370 ವಿಧಿ ರದ್ದುಪಡಿಸುವ ಭರವಸೆ ನೀಡಿದಾಗಲೂ ಈಗ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಲು ಸಾಧ್ಯವಾಗಿದೆ. ಅಲ್ಲಿನ ಜನರು ಬಿಡುಗಡೆಗೆ ಕಾಯುತ್ತಿದ್ದರು. ಈಗ ಅವರು ಸ್ವತಂತ್ರರಾಗಿದ್ದಾರೆ. ಕೇಂದ್ರ ಸರ್ಕಾರದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಸಂಭ್ರಮಾಚರಣೆ ಮಾಡಿದರು. ಮುಖಂಡರಾದ ರವಿಕುಮಾರ್, ಡಿ.ಎಂ.ಮುನೀಂದ್ರ, ನರಸಿಂಹ, ಮನೋಹರ್, ಸಾಗರ್, ದೇವರಾಜ್, ಗಿರೀಶ್, ಮುನೀಂದ್ರ ಇದ್ದರು.